ಸಮುದ್ರ ತೀರದಿಂದ ಸುಮಾರು ಎಂಬತ್ತು ಕಿ.ಮೀ. ದೂರದಲ್ಲಿ ಪೈಪ್ ಒಡೆದ ಪರಿಣಾಮ, ಸರಕಾರಿ ಅಧೀನದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಯ (ಒಎನ್ಜಿಸಿ) ಉತ್ಪಾದನಾ ಘಟಕದಿಂದ ಪೈಪ್ ಮೂಲಕ ಸರಬರಾಜಾಗುತ್ತಿದ್ದ ಕಚ್ಚಾ ತೈಲ ಅಪಾರ ಪ್ರಮಾಣದ ಸೋರಿಕೆಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಪಶ್ಚಿಮ ತೀರದಲ್ಲಿರುವ ಒಎನ್ಜಿಸಿ ಘಟಕದಿಂದ ಎರಡು ಕಿ.ಮೀ. ದೂರದಿಂದ ತೈಲ ಸೋರಿಕೆಯಾಗಿದ್ದು, ಒಎನ್ಜಿಸಿ ಸಂಸ್ಥೆಯ ಮುಂಬಯಿ ಉರನ್ ಟ್ರಂಕ್ (ಎಂಯುಟಿ) ನಿಂದ ಸೋರಿಕೆಯಾಗುತ್ತಿದ್ದ ತೈಲವನ್ನು ಬೆಳಗ್ಗೆ 8.45ಕ್ಕೆ ಪತ್ತೆ.ಹಚ್ಚಲಾಯಿತು ಹಾಗೂ ಒಡನೆಯೇ ಪರಿಹಾರ ಕ್ರಮವನ್ನು ಕೈಗೊಳ್ಳಲಾಯಿತು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ತೀರದ ರಕ್ಷಣಾ ದಳಕ್ಕೆ ವಿಚಾರ ತಿಳಿಸಲಾಗಿದ್ದು, ತೈಲ ಸೋರಿಕೆಯಿಂದ ಪರಿಸರಕ್ಕೆ ಆಗುವ ಹಾನಿಯನ್ನು ಕನಿಷ್ಠಗೊಳಿಸಲು ಕೇಂದ್ರ ತೈಲ ದುರಂತ ಯೋಜನೆಯನ್ನೂ ಜಾಗೃತಗೊಳಿಸಲಾಗಿದೆ.
ಉತ್ತಮ ಗುಣಮಟ್ಟದ ಸಾಧನಗಳನ್ನು ಬಳಸಿ ತೈಲ ಸೋರಿಕೆಯನ್ನು ತಡೆಯಲಾಗಿದೆ. ಆರಂಭದಲ್ಲಿ ಸುಮಾರು ಒಂದು ಮೈಲಿವರೆಗೆ ಈ ತೈಲ ಸೋರಿಕೆ ಹರಡಿತ್ತು ಎಂದು ಅಂದಾಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೈಲ ಮತ್ತು ಅನಿಲ ಉತ್ಪಾದನೆಯನ್ನು ಮುಂಬಯಿ ಕೇಂದ್ರದಿಂದ ಹೀರಾ ಉರನ್ ಟ್ರಂಕ್ (ಹೆಚ್ಯುಟಿ) ಪೈಪ್ಲೈನ್ಗೆ ವರ್ಗಾಯಿಸಲಾಗಿದೆ. ಚೋಡಿಸಿದ ತೈಲ ಮತ್ತು ಅನಿಲ ಬಾವಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮುಚ್ಚಲಾಗಿದೆ. ಇದರಿಂದ ಕೇವಲ ಮೂರು ಗಂಟೆಗಳ ಕಾಲ ಉತ್ಪಾದನೆ ಕುಂಠಿತಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಸುಮಾರು 25,000 ಸಾವಿರ ಬ್ಯಾರಲ್ಗಳ ನಷ್ಟ ಅಂದಾಜಿಸಲಾಗಿದೆ.