ವಿವಿಧ ರಾಜಕೀಯ ಪಕ್ಷಗಳ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಈಗ ತಿರುಪತಿ ಕಡೆಗೆ ದಾಂಗುಡಿಯಿಡುತ್ತಿದ್ದಾರಂತೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮಗೆ ಜಯ ನೀಡು ಎಂಬುದು ಎಲ್ಲ ಅಭ್ಯರ್ಥಿಗಳೀಗ ತಿರುಪತಿ ವೆಂಕಟೇಶ್ವರನಿಗೆ ಕೈಮುಗಿದು ಹರಕೆ ಹೊರುತ್ತಿದ್ದಾರಂತೆ.
ತೆಲುಗು ದೇಶಂನ ಚಂದ್ರಬಾಬು ನಾಯ್ಡು ತಮ್ಮ ಸಂಸಾರ ಸಮೇತ ತಿರುಪತಿಗೆ ಬುಧವಾರ ಭೇಟಿ ನೀಡಿದ್ದು, ತಮಗೆ ಜಯ ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಲ್ಲದೆ, ಈಗಷ್ಟೆ ಹೊಸ ಉತ್ಸಾಹದಲ್ಲಿರುವ ತೆಲುಗು ಸ್ಟಾರ್ ಚಿರಂಜೀವಿ ತಮ್ಮ ಪ್ರಜಾರಾಜ್ಯಂ ಪಕ್ಷಕ್ಕೆ ವಿಜಯಮಾಲೆ ಬೀಳುವಂತಾಗಲಿ ಎಂದು ತಮ್ಮ ಪತ್ನಿ ಸುರೇಖಾ ಜತೆಗೂಡಿ ಬಂದು ಪ್ರಾರ್ಥಿಸಿದ್ದಾರಂತೆ. ತಿರುಪತಿ ಭೇಟಿಯ ನಂತರ ತಿರುಪತಿ ಕ್ಷೇತ್ರದಿಂದ ಏ.4ರಂದು ಚಿರಂಜೀವಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ತಿರುಪತಿ ದೇವಸ್ಥಾನದ ಮೂಲಗಳ ಪ್ರಕಾರ, ಕೇವಲ ಇವರಷ್ಟೇ ಅಲ್ಲ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರಗಳಿಂದಲೂ ವಿವಿಧ ಅಭ್ಯರ್ಥಿಗಳು ಬಂದು ದೇವರಲ್ಲಿ ಬೇಡಿಕೊಂಡು ಹೊಗುತ್ತಿರುವುದು ಹೆಚ್ಚಾಗಿದ ಎನ್ನುತ್ತಾರೆ.