ಎನ್ಡಿಎ ಪಾಳಯದಲ್ಲಿ ಸಣ್ಣಗೆ ಭೂಕಂಪನವಾಗಿದೆ. ಬಿಹಾರಕ್ಕೆ ಯಾರು ವಿಶೇಷ ಸ್ಥಾನ-ಮಾನ ನೀಡುತ್ತಾರೋ ಮತ್ತು ಹಿಂದುಳಿದ ರಾಜ್ಯಕ್ಕೆ ಯಾರು ಹೆಚ್ಚು ಅನುದಾನ ಒದಗಿಸುತ್ತಾರೋ ಕೇಂದ್ರದಲ್ಲಿ ಅಂತಹ ಮೈತ್ರಿಕೂಟವನ್ನು ತಾವು ಬೆಂಬಲಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ದಿಢೀರ್ ಹೇಳಿಕೆ ನೀಡಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ನಿತೀಶ್, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಷಯವೇ ಕೇಂದ್ರದಲ್ಲಿ ನಿರ್ಮಾಣಗೊಳ್ಳಲಿರುವ ಸರಕಾರಕ್ಕೆ ಬೆಂಬಲ ನೀಡುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ಈ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರಾಕರಿಸಿದ್ದರು. ಈಗ ತಾನು ಆಯ್ಕೆಗಳನ್ನು ಮುಕ್ತವಾಗಿರಿಸಿರುವುದಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಹೇಳಿರುವ ಅವರು, ಪ್ರಧಾನಿ ಪದವಿ ಮೇಲೆ ಕಣ್ಣಿಟ್ಟಿದ್ದೀರೇ ಎಂದು ಕೇಳಿದಾಗ, ಪ್ರಧಾನಿ ಯಾರಾಗಬೇಕೆಂಬುದು ಇನ್ನೂ ಚರ್ಚೆಯಾಗುತ್ತಿರುವ ವಿಷಯ ಎಂದುತ್ತರಿಸಿದರು.
ಪ್ರತಿಯೊಂದು ಪಕ್ಷ ಮತ್ತು ಚುನಾವಣಾಪೂರ್ವ ಮಿತ್ರಕೂಟಗಳು ದೆಹಲಿಯಲ್ಲಿ ನಾವು ಸರಕಾರ ರಚಿಸುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಈ ಹೊತ್ತಿನಲ್ಲಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷ ಅಥವಾ ಮೈತ್ರಿಕೂಟಕ್ಕೆ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ಪಡೆಯುವ ಪೂರ್ವಶರತ್ತು ವಿಧಿಸುವಂತೆ ಬಿಹಾರದ ಎಲ್ಲ ಪಕ್ಷಗಳನ್ನೂ ನಾನು ಕೋರುತ್ತಿದ್ದೇನೆ ಎಂದು ಹೇಳಿದರು.