ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದೀಗ ಸರ್ಕಾರ ರಚನೆಗೂ ಮುನ್ನ ತಮ್ಮ, ತಮ್ಮ ಪಕ್ಷಗಳಿಗೆ ನೀಡಬೇಕಾದ 'ಸ್ಥಾನ-ಮಾನ'ಗಳ ಬೇಡಿಕೆ ಪಟ್ಟಿಯನ್ನು ಮಂಡಿಸತೊಡಗಿವೆ.
ಯುಪಿಎ ಮೈತ್ರಿಕೂಟ 261ಸೀಟುಗಳನ್ನು ಗಳಿಸಿದ್ದು, ಇದೀಗ ಮ್ಯಾಜಿಕ್ ಸಂಖ್ಯೆಯಾದ 272ಕ್ಕೆ ಬೇಕಾಗಿರುವ ಬಾಕಿ 11ಸೀಟುಗಳಿಗಾಗಿ ಆರ್ಎಲ್ಡಿ(05), ಜೆಡಿಎಸ್(03), ಆರ್ಜೆಡಿ (04ಸೀಟು)ಗಳತ್ತ ಕಾಂಗ್ರೆಸ್ ಚಿತ್ತ ನೆಟ್ಟಿದೆ. ಅದರ ಮಧ್ಯೆಯೇ ಯುಪಿಎ ಮೈತ್ರಿಕೂಟ ಚುನಾವಣೆಯಲ್ಲಿ ಯಶಸ್ಸು ಸಾಧಿಸಲು ಪ್ರಮುಖ ಪಾತ್ರವಹಿಸಿರುವ ತಮಿಳುನಾಡಿನ ಎಂ.ಕರುಣಾನಿಧಿ ನೇತೃತ್ವದ ಡಿಎಂಕೆ ಏಳು ಕ್ಯಾಬಿನೆಟ್ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದೆ.
ಅದರಂತೆ ಎನ್ಸಿಪಿ (ಕೃಷಿಖಾತೆ), ಜೆಡಿಎಸ್(ಯಾವ ಸಚಿವ ಹುದ್ದೆ ಕೊಟ್ಟರು ಸರಿ) ಸದ್ಯಕ್ಕೆ ಯಾವುದೇ ಬೇಡಿಕೆ ಮುಂದಿಟ್ಟಿಲ್ಲ, ಆರ್ಜೆಡಿಯ ಲಾಲುಪ್ರಸಾದ್ ಮಾತ್ರ ರೈಲ್ವೆ ಖಾತೆಯನ್ನೇ ಮತ್ತೆ ಕೇಳಿದ್ದಾರೆ.
ಒಂದು ಮೂಲದ ಪ್ರಕಾರ ಲಾಲೂ ಕೊನೆಗೆ ಗ್ರಾಮೀಣಾಭಿವೃದ್ಧಿ ಸಚಿವಗಿರಿಗೆ ತೃಪ್ತಿಪಟ್ಟುಕೊಳ್ಳಬಹುದು ಎಂದು ಹೇಳಲಾಗಿದೆ. ಇನ್ನು ತೃಣಮೂಲ ಕಾಂಗ್ರೆಸ್ನ 'ದೀದಿ' ರೈಲ್ವೆ ಖಾತೆ, ಸಿವಿಲ್ ಸಪ್ಲೈಯ್ನಂತಹ ಪ್ರಮುಖ ಖಾತೆಗೆ ಬೇಡಿಕೆ ಇಟ್ಟಿದೆ. ಆದರೆ ಡಿಎಂಕೆ ಮಾತ್ರ ಕನಿಮೋಳಿ, ಮಾರನ್ ಹಾಗೂ ಅಳಗಿರಿ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿಯುವ ಸಾಧ್ಯತೆ ಇದೆ.