ಸದ್ಯಕ್ಕೆ ಮದುವೆಯೇ ಇಲ್ಲ ಎನ್ನುತ್ತಿದ್ದ ಕಾಮಿಡಿ ಟೈಮ್ ಹುಡುಗ, ಮುಂಗಾರು ಮಳೆ ಹೀರೋ, ಗೋಲ್ಡನ್ ಸ್ಟಾರ್ ಗಣೇಶ್ ಸದ್ದುಗದ್ದಲವಿಲ್ಲದೆ ಮದುವೆಯಾಗಿದ್ದಾರೆ.
ತನ್ನ ವಿವಾಹದ ರೀತಿ ಮತ್ತು ನೀತಿಯ ಮುಖಾಂತರ ತಾನು ರೀಲ್ ಲೈಫ್ ಹೀರೋ ಮಾತ್ರವಲ್ಲ, ರಿಯಲ್ ಲೈಫ್ ಹೀರೋ ಕೂಡ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಇವರು ವರಿಸಿದ್ದು ವಿಚ್ಛೇದಿತ ಹುಡುಗಿ ಶಿಲ್ಪಾಳನ್ನು.
ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಬಾರ್ಕೂರಿನ ಶಿಲ್ಪಾ ಅವರಿಗೆ ಈ ಹಿಂದೆ ಮೈಸೂರಿನ ಪ್ರತಿಷ್ಠಿತ ರೆಸಾರ್ಟ್ ಒಂದರ ಮಾಲೀಕ ವಿಕ್ರಮ್ ಜತೆ ವಿವಾಹವಾಗಿತ್ತು. ಒಂದು ಮಗುವೂ ಜನಿಸಿತ್ತು. ಆದರೆ ಮೂರು ವರ್ಷಗಳಲ್ಲಿ ಅವರು ದಾಂಪತ್ಯ ಮುರಿದು ಬಿದ್ದ ಕಾರಣ ಅಲ್ಲಿಂದ ಬೆಂಗಳೂರಿಗೆ ಆಗಮಿಸಿದ್ದು ಇಂಟೀರಿಯರ್ ಡೆಕೋರೇಟರ್ ಆಗಿದ್ದ ಶಿಲ್ಪಾ ಈಗ ಗಣೇಶ್ ಪತ್ನಿಯಾಗಿದ್ದಾರೆ.
ಈ ಮಧ್ಯೆ ಗಣೇಶ್ಗೆ ಮದುವೆಯಂತೆ ಅಂತಾ ಗಾಂಧಿನಗರದಲ್ಲಿ ಸುದ್ದಿ ಹಬ್ಬುತ್ತಿರುವಂತೆ ಗಣೇಶ್ಗೆ ದೊಡ್ಡ ಸಮಸ್ಯೆಯೇ ಶುರುವಾಗಿತ್ತು. ಮೇಲಿಂದ ಮೇಲೆ ಫೋನ್ ಕಾಲ್ಗಳು, ಆತ್ಮಹತ್ಯೆ ಬೆದರಿಕೆಗಳು ಬರುತ್ತಿದ್ದಂತೆ, ಇನ್ನು ತಡಮಾಡುವುದು ತರವಲ್ಲ ಎಂದು ತರಾತುರಿಯಲ್ಲಿ ಮದುವೆಯಾಗಿ ವಿವಾದಕ್ಕೆ ಮಂಗಳ ಹಾಡಲು ಗಣೇಶ್ ಬಯಸಿದರು.
ಗಣೇಶ್ ತಗಿರುವ ವರ್ಚಸ್ಸು, ವಯಸ್ಸು, ಸ್ಯಾಂಡಲ್ವುಡ್ನಲ್ಲಿ ಆತನಿಗಿರುವ ಬೇಡಿಕೆ ಇವುಗಳನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡರೆ ಆತ ಯಾವ ಹುಡುಗಿನ್ನು ಬೇಕಿದ್ದರೂ ಬಾಳ ಸಂಗಾತಿಯನ್ನಾಗಿ ಆಯ್ದುಕೊಳ್ಳಬಹುದಿತ್ತು, ಮೆರೆಯಬಹುದಿತ್ತು.
ಆದರೆ ವಿಚ್ಛೇದಿತೆ, ಒಂದು ಮಗುವಿನ ಅಮ್ಮನನ್ನು ಪ್ರೀತಿಸಿ ವರಿಸುವ ಮೂಲಕ ಅವರು ತನ್ನ ಮಾನಸಿಕ ಪಕ್ವತೆಯನ್ನು ತೋರಿಸಿಕೊಟ್ಟಿದ್ದಾರೆ. ವಿಚ್ಛೇದಿತೆಯೋರ್ವಳ ಕೈ ಹಿಡಿದು, ಅವರೊಂದಿಗೆ ಬದುಕಲು ನಿರ್ಧರಿಸುವ ಮೂಲಕ ತನ್ನ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಈ ಅರ್ಥದಲ್ಲಿಯೂ ಗಣೇಶ್ ಗೋಲ್ಡನ್ಸ್ಟಾರ್!
ಜೈ ಗಣೇಶ! ಮದುವೆ ನೂರ್ಕಾಲ ಬಾಳಲಿ, ನೆಮ್ಮದಿಯ ಬದುಕಿ ಕಾಣಿರಿ.
|