ತಮ್ಮ ಬೆಂಗಾವಲು ಪಡೆ ಮೇಲೆ ಆತ್ಮಹತ್ಯೆದಾಳಿ ಮಾಡಿದ ಘಟನೆ ಬಗ್ಗೆ ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಪೊಲೀಸರಲ್ಲಿ ದೂರು ನೀಡಿದ್ದು, ಹೆಸರಿಸದ ಮೂವರು ಅಧಿಕಾರಿಗಳಿಂದ ತಮ್ಮ ಜೀವಕ್ಕೆ ಬೆದರಿಕೆವುಂಟಾಗಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಆತ್ಮಹತ್ಯೆ ದಾಳಿ ಬಗ್ಗೆ ತನಿಖೆಯನ್ನು ಚುರುಕಿನ ಗತಿಯಲ್ಲಿ ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರಿದಂತಾಗಿದೆ.
ಭುಟ್ಟೊ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಹಿರಿಯ ನಾಯಕರು ಸೇರಿದಂತೆ ಅವರ ನಿಕಟವರ್ತಿಗಳಾದ ಶೆರಿ ರೆಹಮಾನ್, ಸೈಯದ್ ಕಾಯಿಮ್ ಆಲಿ ಶಾ ಮತ್ತು ಅಫ್ತಬ್ ಬಹಾದುರಾಬಾದ್ ಪೊಲೀಸ್ ಠಾಣೆಗೆ ತೆರಳಿ ಎಫ್ಐಆರ್ ದಾಖಲಿಸುವಂತೆ ಪಕ್ಷದ ಮುಖಂಡರ ಪತ್ರವನ್ನು ನೀಡಿದರು.
ಭಯೋತ್ಪಾದನೆ ದಾಳಿಯ ರೂವಾರಿಗಳನ್ನು ಪತ್ತೆ ಮಾಡಲು ಕ್ಷಿಪ್ರಗತಿಯ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಕೋರಲಾಗಿದೆ.ಮೂವರು ಸರ್ಕಾರಿ ಅಧಿಕಾರಿಗಳು ತಮ್ಮ ಹತ್ಯೆಗೆ ಪ್ರಯತ್ನಿಸಬಹುದೆಂದು ಅಧ್ಯಕ್ಷ ಮುಷರ್ರಫ್ಗೆ ಎರಡು ದಿನಗಳ ಮುಂಚೆಯೇ ಬೇನಜೀರ್ ಪತ್ರ ಬರೆದಿದ್ದನ್ನು ಅದರಲ್ಲಿ ಪ್ರಸ್ತಾಪಿಸಲಾಗಿದೆ.
ಭುಟ್ಟೊ ಪತ್ರಿಕಾಗೋಷ್ಠಿಯಲ್ಲಿ ಮೂವರು ಅಧಿಕಾರಿಗಳ ಬಗ್ಗೆ ಸಾರ್ವಜನಿಕವಾಗಿ ತಿಳಿಸಿದ್ದರೂ ಅವರ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಆದಾಗ್ಯೂ, ಸಿಂಧ್ ಮುಖ್ಯಮಂತ್ರಿ ಅರ್ಬಾಬ್ ಗುಲಾಂ ರಹೀಮ್, ಪಂಜಾಬ್ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥ ಎಜಾಜ್ ಅಹ್ಮದ್ ಎಂದು ದಿ ನ್ಯೂಸ್ ಸುದ್ದಿಪತ್ರಿಕೆ ಅಜ್ಞಾತ ಮೂಲಗಳನ್ನು ಉಲ್ಲೇಶಿಸಿ ಹೇಳಿದೆ.
|