ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಹೇರಿದ ನಿರ್ಧಾರವನ್ನು 8 ಮಂದಿ ಸದಸ್ಯರ ಪಾಕಿಸ್ತಾನ ಸುಪ್ರೀಂಕೋರ್ಟ್ ಪೀಠವು ಅಸಿಂಧು ಎಂದು ತಳ್ಳಿ ಹಾಕಿರುವಂತೆಯೇ, ಸುಪ್ರೀಂ ಕೋರ್ಟ್ ಪ್ರವೇಶಿಸಿರುವ ಸೇನಾ ಪಡೆಗಳು, ಮುಖ್ಯ ನ್ಯಾಯಮೂರ್ತಿಯವರನ್ನು ಅಲ್ಲಿಂದ ತೆರವುಗೊಳಿಸಿವೆ.
ಮುಷರಫ್ ಚುನಾವಣೆ ಸ್ಪರ್ಧೆಗೆ ಅರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡು ತೀರ್ಪು ನೀಡಲಿತ್ತು. ಇದು ತನ್ನ ವಿರುದ್ಧವಾಗಿ ಬರಲಿದೆ ಎಂದು ಬಲವಾಗಿ ನಂಬಿದ್ದ ಮುಷರಫ್, ತುರ್ತು ಪರಿಸ್ಥಿತಿಗೆ ಮುಂದಾಗಿದ್ದಾರೆ. ಇದೀಗ ಸೇನಾ ಪಡೆಗಳು ಸುಪ್ರೀಂ ಕೋರ್ಟ್ ಕಟ್ಟಡವನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ.
ನೂರಾರು ಪೊಲೀಸರು ಸುಪ್ರೀಂಕೋರ್ಟ್ ಸುತ್ತಮುತ್ತ ಮಾರ್ಗಕ್ಕೆ ತಡೆ ಹಾಕಿದ್ದು, ನ್ಯಾಯಾಧೀಶರು ಅದರೊಳಗೇ ಇದ್ದರು.
ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಐರೋಪ್ಯ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ದೇಶತ್ಯಕ್ತ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಕೆಂಡವಾಗಿದ್ದಾರೆ.
ಇದು ಪ್ರಜಾತಂತ್ರವನ್ನು ಮಟ್ಟಹಾಕುವ ಯತ್ನವಾಗಿದ್ದು, ಇದನ್ನು ಎಲ್ಲರೂ ಬಲವಾಗಿ ವಿರೋಧಿಸಬೇಕಾಗಿದೆ ಎಂದಿದ್ದಾರಲ್ಲದೆ, ಮತ್ತೊಬ್ಬ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರನ್ನು ಸಂಪರ್ಕಿಸಿ, ಒಗ್ಗಟ್ಟಿನ ಹೋರಾಟ ಮಾಡುವ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಸುದ್ದಿ ಚಾನೆಲ್ಗಳ ಪ್ರಸಾರ ತಡೆಹಿಡಿಯಲಾಗಿದ್ದು, ಅರೆ ಸೇನಾ ಪಡೆಗಳು ದೇಶದ ಬಹುತೇಕ ಆಯಕಟ್ಟಿನ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ.
|