ತಮಿಳುನಾಡು ಕಡಲಿನಲ್ಲಿ ಎಲ್ಟಿಟಿಇ ಚಟುವಟಿಕೆಗಳು ತೀವ್ರಗೊಂಡಿರುವುದಾಗಿ ಶ್ರೀಲಂಕಾ ಪ್ರಧಾನಮಂತ್ರಿ ವಿಕ್ರಮನಾಯಕೆ ಹೇಳಿಕೆಯ ಬಗ್ಗೆ ನಿಗಾವಹಿಸುವುದಾಗಿ ಭಾರತ ಭರವಸೆ ನೀಡಿದೆ. ನಮಗೆ ಅಂತಹ ಮಾಹಿತಿ ಯಾವುದೂ ಬಂದಿಲ್ಲ.
ಶ್ರೀಲಂಕಾ ಸರ್ಕಾರದ ಜತೆ ನಾವು ಚರ್ಚಿಸಿ ಸರ್ಕಾರ ನೀಡುವ ಮಾಹಿತಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭಾರತೀಯ ರಾಯಭಾರ ಕಚೇರಿಯ ವಕ್ತಾರ ದಿನಕರ್ ಅಸ್ತಾನಾ ಇಲ್ಲಿ ತಿಳಿಸಿದರು. ತಮಿಳುನಾಡು ಕಡಲತೀರದಲ್ಲಿ ಎಲ್ಟಿಟಿಇ ಉಗ್ರರ ಚಟುವಟಿಕೆ ಬಿರುಸುಗೊಂಡಿದೆ ಎಂಬ ವಿಕ್ರಮನಾಯಕೆ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸುತ್ತಾ ಮೇಲಿನ ಮಾತು ಹೇಳಿದರು.
ಇನ್ನೊಂದು ತಿಂಗಳು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ವಿಸ್ತರಿಸುವ ಬಗ್ಗೆ ಚರ್ಚೆ ಆರಂಭಿಸಿದ ಶ್ರೀಲಂಕಾ ಪ್ರಧಾನಮಂತ್ರಿ ಇದರ ಬಗ್ಗೆ ಪ್ರಸ್ತಾಪ ಮಾಡಿದರು. ಇತ್ತೀಚೆಗೆ ಹೆಲಿಕಾಪ್ಟರ್ ಮತ್ತು ದೂರನಿಯಂತ್ರಕ ವಿಮಾನದ ಬಿಡಿಭಾಗಗಳನ್ನು ಒಯ್ಯುತ್ತಿದ್ದ ಎಲ್ಟಿಟಿಇ ದೋಣಿಯನ್ನು ನೌಕಾಪಡೆ ತಡೆದಿದ್ದನ್ನು ಅವರು ಪ್ರಸ್ತಾಪಿಸಿದರು.
|