ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿರುವ ಜನರಲ್ ಪರ್ವೇಜ್ ಮುಷರ್ರಫ್ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸುವ ಹಕ್ಕು ಅವರಿಗಿಲ್ಲ ಎಂದು ಹೇಳಿದ್ದಾರೆ. ಭುಟ್ಟೊ ಸಂಘರ್ಷಣಾ ಮನೋಭಾವ ಹೊಂದಿದ್ದು ಅವರ ಜತೆ ಕೆಲಸ ಮಾಡುವುದು ಕಷ್ಟ ಎಂದು ಅವರು ನುಡಿದರು.
ಪ್ರಜಾಪ್ರಭುತ್ವ ತರುವುದಕ್ಕಿಂತ ಹೆಚ್ಚಾಗಿ ರಾಷ್ಟ್ರವನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ಅವರು ನುಡಿದರು. "ನೀವು ಸಂಧಾನದ ಮಾರ್ಗದ ಉದ್ದೇಶದಿಂದ ಬಂದಿದ್ದೀರಿ. ಆದರೆ ಇಲ್ಲಿಗೆ ಕಾಲಿರಿಸಿದ ಕೂಡಲೇ ಸಂಘರ್ಷದ ಮಾರ್ಗ ಹಿಡಿದಿದ್ದೀರಿ. ಇದರಿಂದ ನಕಾರಾತ್ಮಕ ಅಲೆಗಳು ಸೃಷ್ಟಿಯಾಗುತ್ತದೆಂಬ ಭಯವುಂಟಾಗಿದೆ" ಎಂದು ಭುಟ್ಟೊ ಅವರನ್ನು ಉದ್ದೇಶಿಸಿ ಮುಷರ್ರಫ್ ಸಂದರ್ಶನವೊಂದರಲ್ಲಿ ಹೇಳಿದರು.
ಭುಟ್ಟೊ ಗೃಹಬಂಧನದ ಬಗ್ಗೆ ಪ್ರತಿಕ್ರಿಯಿಸುತ್ತಾ, ಅವರ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಎಲಾಹಿ ಸಂಚು ನಡೆಸಿದ್ದಾರೆಂದು ಆಪಾದಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ. ಯಾವುದೇ ದುರ್ಘಟನೆ ಸಂಭವಿಸಿದ ಪಕ್ಷದಲ್ಲಿ ಸರ್ಕಾರದ ವಿರುದ್ಧ ಅವರು ಆರೋಪ ಹೊರಿಸುವುದನ್ನು ತಪ್ಪಿಸುವುದು ಇದರ ಹಿಂದಿನ ಉದ್ದೇಶ ಎಂದು ಹೇಳಿದರು.
ಬೆಂಬಲ ನಿಲ್ಲಿಸಲು ಕರೆ
ಮುಷರ್ರಫ್ ಅವರನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಪಾಕಿಸ್ತಾನ ಪ್ರತಿಪಕ್ಷದ ನಾಯಕ ಬೇನಜೀರ್ ಭುಟ್ಟೊ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು. ಮುಷರ್ರಫ್ ನಿರಂಕುಶ ಆಡಳಿತವು ಅಣ್ವಸ್ತ್ರ ಸಜ್ಜಿತ ರಾಷ್ಟ್ರವನ್ನು ನುಂಗಿಹಾಕುವ ಬೆದರಿಕೆವೊಡ್ಡಿರುವುದರಿಂದ ಈ ವ್ಯಕ್ತಿಗೆ ಬೆಂಬಲ ನೀಡುವುದನ್ನು ನಿಲ್ಲಿಸಿ ಎಂದು ಭುಟ್ಟೊ ದೂರವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ.
|