8 ವರ್ಷಗಳ ಕೆಳಗೆ ಒರಿಸ್ಸಾದಲ್ಲಿ ವಿನಾಶ ಉಂಟುಮಾಡಿದ ಪ್ರಮಾಣದ ಮತ್ತೊಂದು ಭಾರೀ ಚಂಡಮಾರುತ ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿಗೆ ಅಭಿಮುಖವಾಗಿ ಮುನ್ನಡೆದಿದ್ದು, ಸಾಗರ್ ದ್ವೀಪಗಳಿಗೆ ಅಪ್ಪಳಿಸುವುದೆಂದು ನಿರೀಕ್ಷಿಸಲಾಗಿದೆ. ಸಿಡರ್ ಚಂಡಮಾರುತ ಅಪ್ಪಳಿಸಲಿರುವ ಸುದ್ದಿ ತಿಳಿಯುತ್ತಿದ್ದಂತೆ ಉಭಯ ರಾಷ್ಟ್ರಗಳ ಕರಾವಳಿ ತೀರದಲ್ಲಿರುವ ಸಾವಿರಾರು ಜನರು ಸ್ಥಳಾಂತರ ಮಾಡಿದ್ದಾರೆ.
ಈ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ ರಾಜ್ಯ ಗೃಹಕಾರ್ಯದರ್ಶಿ ಪಿ.ಆರ್. ರಾಯ್ ಅಂಡಮಾನ್ ದ್ವೀಪಗಳಿಗೆ ಉತ್ತರದಲ್ಲಿ ಕೇಂದ್ರೀಕೃತವಾದ ಚಂಡಮಾರುತ ದಿಕ್ಕನ್ನು ಬದಲಾಯಿಸಿದ್ದು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ತೀರಕ್ಕೆ ಅಭಿಮುಖವಾಗಿ ಹೊರಟಿದೆ ಎಂದು ಹೇಳಿದರು.
ವಿನಾಶಕಾರಿ ಚಂಡಮಾರುತಗಳ ಇತಿಹಾಸ ಹೊಂದಿರುವ ಬಾಂಗ್ಲಾದೇಶದಲ್ಲಿ ಆಡಳಿತ ಸನ್ನದ್ಧ ಸ್ಥಿತಿಯಲ್ಲಿದೆ. ಚಿತ್ತಗಾಂಗ್ ಮತ್ತು ಸೀ ವಿಮಾನನಿಲ್ದಾಣಗಳನ್ನು ಮುಚ್ಚಲಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ. 1970ರಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಸುಮಾರು 5 ಲಕ್ಷ ಜನರು ಬಲಿಯಾಗಿದ್ದರು. 1991ರಲ್ಲಿ ಚಂಡಮಾರುತದ ಹಾವಳಿ ಫಲವಾಗಿ 138,000 ಜನರು ಅಸುನೀಗಿದ್ದರು.
ಚಂಡಮಾರುತ ಒರಿಸ್ಸಾ ಕರಾವಳಿಯಿಂದ ದಿಕ್ಕು ಬದಲಾಯಿಸಿದ್ದರೂ ರಾಜ್ಯಸರ್ಕಾರವು ಕಟ್ಟೆಚ್ಚರ ವಹಿಸಿದೆ. ಒರಿಸ್ಸಾ ಕರಾವಳಿಗೆ ತೀವ್ರ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿಲ್ಲ.
ಆದರೆ ನಾವು ಸೂಕ್ಷ್ಮವಾಗಿ ಅದರ ಮಾರ್ಗವನ್ನು ಗಮನಿಸುತ್ತಿದ್ದು, ಒರಿಸ್ಸಾದ ಮೇಲೆ ಅದರ ತೀವ್ರತೆಯನ್ನು ತಿಳಿಯಲು ಯತ್ನಿಸಿದ್ದೇವೆ ಎಂದು ಭುವನೇಶ್ವರ ಹವಾಮಾನ ಇಲಾಖೆ ನಿರ್ದೇಶಕ ಎಸ್.ಸಿ. ಸಾಹು ತಿಳಿಸಿದ್ದಾರೆ.
|