ಶ್ರೀಲಂಕಾದಲ್ಲಿ ಶಾಂತಿಸ್ಥಾಪನೆ ಸಾಧ್ಯವೇ ಇಲ್ಲ ಎಂದು ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಮಂಗಳವಾರ ಹೇಳಿದ ಕೆಲವೇ ಗಂಟೆಗಳಲ್ಲಿ ಅವರ ಮಾತಿನ ಅರ್ಥವೇನೆಂಬುದನ್ನು ಎಲ್ಟಿಟಿಇ ಆತ್ಮಹತ್ಯೆ ದಾಳಿ ಮೂಲಕ ಸಾಬೀತುಮಾಡಿದೆ. ಕಲ್ಯಾಣ ಸಚಿವ ಡೌಗ್ಲಾಸ್ ದೇವಾನಂದ ಕಚೇರಿಯಲ್ಲಿ ಬುಧವಾರ ಮಹಿಳಾ ಆತ್ಮಹತ್ಯೆ ಬಾಂಬರ್ ಸ್ಫೋಟಿಸಿಕೊಳ್ಳುವ ಮೂಲಕ ದ್ವೀಪರಾಷ್ಟ್ರದಲ್ಲಿ ಯುದ್ಧ ಮುಂದುವರಿಯುವ ಎಲ್ಲ ಲಕ್ಷಣಗಳು ಗೋಚರಿಸಿವೆ.
ಸಚಿವರು ಹತ್ಯೆಯತ್ನದಿಂದ ಪಾರಾಗಿದ್ದರೂ, ಇನ್ನೂ ಮೂರು ಮಂದಿ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಡೌಗ್ಲಾಸ್ ದೇವಾನಂದ ಕಚೇರಿಯಿರುವ ಕಟ್ಟಡಕ್ಕೆ ಪ್ರವೇಶಿಸಲು ಯತ್ನಿಸಿದ ದೈಹಿಕ ಅಂಗವಿಕಲೆಯೆಂದು ಹೇಳಲಾದ ಮಹಿಳೆಯನ್ನು ತಡೆದಾಗ ಅವಳು ಕಟ್ಟಡದ ಹೊರಗೆ ಬಾಂಬ್ ಸ್ಫೋಟಿಸಿದಳು.
ಸುಮಾರು 3 ದಾರಿಹೋಕರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಈಳಂ ಪೀಪಲ್ ಡೆಮಾಕ್ರಟಿಕ್ ಪಕ್ಷದ ನಾಯಕ ಆ ಸಂದರ್ಭದಲ್ಲಿ ಕಚೇರಿಯಲ್ಲಿ ಇರಲಿಲ್ಲ. ಎಲ್ಟಿಟಿಯ ಕಟು ಟೀಕಾಕಾರರಾದ ದೇವಾನಂದ ಉಗ್ರರ ಸಂಘಟನೆಯ ಹಲವು ಹತ್ಯೆಯತ್ನಗಳಿಂದ ಪಾರಾಗಿದ್ದಾರೆ.
ಇದಕ್ಕೆ ಮುಂಚೆ, ಅರಣ್ಯದ ಅಡಗುತಾಣದಿಂದ ವಾರ್ಷಿಕ ನೀತಿ ಭಾಷಣ ಮಾಡಿದ ಪ್ರಭಾಕರನ್ ದ್ವೀಪದ ಸಿಂಹಳೀಯರ ವಿರುದ್ಧ ಉಗ್ರ ವಾಗ್ದಾಳಿ ನಡೆಸುವ ಮೂಲಕ ದ್ವೀಪವು ಪೂರ್ಣ ಸ್ವರೂಪದ ಯುದ್ಧಕ್ಕೆ ಹೋಗುವುದಕ್ಕೆ ವೇದಿಕೆ ಸಜ್ಜಾಗಿದೆ.
|