ಮಲೇಶಿಯದ ಮಾನವ ಹಕ್ಕು ಸಂಘಟನೆಯಾದ ಹಿಂದು ಹಕ್ಕುಗಳ ಕಾರ್ಯಪಡೆ(ಹೈಂಡ್ರಾಫ್) ಪ್ರಧಾನಮಂತ್ರಿ ಅಬ್ದುಲ್ಲಾ ಬಡಾವಿ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದೆ. ಶ್ರೀಲಂಕಾದ ಎಲ್ಟಿಟಿಇ ಸಂಘಟನೆಗೂ ತಮ್ಮ ಸಂಘಟನೆಗೂ ನಂಟು ಕಲ್ಪಿಸಿರುವ ಹಿನ್ನೆಲೆಯಲ್ಲಿ ಹೈಂಡ್ರಾಫ್ ಈ ದೂರು ನೀಡಿದೆ.
ಎಲ್ಟಿಟಿಇ ಅಥವಾ ಯಾವುದೇ ಭಯೋತ್ಪಾದನೆ ಸಂಘಟನೆ ಜತೆ ತಮ್ಮ ಸಂಪರ್ಕ ಶೂನ್ಯ ಎಂದು ಹೈಂಡ್ರಾಫ್ ಹಿರಿಯ ನಾಯಕ ಮತ್ತು ಕಾನೂನು ಸಲಹೆಗಾರ ಪಿ. ಉದಯಕುಮಾರ್ ಪ್ರತಿಪಾದಿಸಿದರು. ನಾವು ಹಿಂಸಾಚಾರಕ್ಕೆ ಬೆಂಬಲ ಕೊಡುವುದಿಲ್ಲ.
ನಮ್ಮದು ಅಹಿಂಸಾವಾದಿ ಗುಂಪು ಎಂದು ಉದಯ ಕುಮಾರ್ ಹೇಳಿದ್ದಾರೆಂದು ಸ್ಟಾರ್ ಸುದ್ದಿಪತ್ರಿಕೆ ವರದಿ ಮಾಡಿದೆ. ಜಲಾನ್ ಟ್ರಾವರ್ಸ್ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಿರುವ ಉದಯಕುಮಾರ್ , ಅಟಾರ್ನಿ ಜನರಲ್ ಅಬ್ದುಲ್ ಗಾನಿ ಪಟೇಲ್, ಸಚಿವ ಮೊಹಮದ್ ನಾಜ್ರಿ ಅಜೀಜ್ ಮತ್ತು ಇನ್ಸ್ಪೆಕ್ಟರ್ ಜನರಲ್ ಮುಸಾ ಹುಸೇನ್ ಅವರನ್ನು ತಮ್ಮ ದೂರಿನಲ್ಲಿ ಹೆಸರಿಸಿದ್ದಾರೆ.
ಭಾರತದ 20 ಲಕ್ಷ ತಮಿಳು ಜನಾಂಗದ ಪರವಾಗಿ ಕುಂದುಕೊರತೆ ತೋಡಿಕೊಳ್ಳಲು ಪ್ರತಿಭಟನಾ ರಾಲಿ ಆಯೋಜಿಸಿದ ಹೈಂಡ್ರಾಫ್ ನಾಯಕರು ಸರ್ಕಾರ ತಮ್ಮ ವಿರುದ್ಧ ಕಠಿಣ ಅಂತಾರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೆ ತರಬಹುದೆಂಬ ಶಂಕೆಯಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ.
ಈ ರಾಲಿಯನ್ನು ಅಕ್ರಮ ಎಂದು ಘೋಷಿಸಲಾಗಿದೆ. ಹೈಂಡ್ರಾಫ್ ತೀವ್ರಗಾಮಿ ಗುಂಪು ಎಂದು ಸರ್ಕಾರ ಕರೆದಿದ್ದರೂ, ಅದು ಭಯೋತ್ಪಾದಕ ಗುಂಪು ಎಂದು ಹೆಸರಿಸುವುದಕ್ಕೆ ಸಮೀಪದಲ್ಲಿದ್ದು, ಅದರಿಂದ ಕಠಿಣ ಕಾನೂನುಗಳನ್ನು ಹೇರಿ ಹೈಂಡ್ರಾಫ್ ಸದಸ್ಯರನ್ನು ಬಂಧಿಸುವ ಸಾಧ್ಯತೆಯಿದೆ.
|