ಬೇಹುಗಾರಿಕಾ ಆರೋಪದಲ್ಲಿ ಬಂಧನಕ್ಕೀಡಾಗಿದ್ದ ಭಾರತೀಯ ಪ್ರಜೆ ಕಾಶ್ಮೀರ್ ಸಿಂಗ್ಗೆ ಪಾಕಿಸ್ತಾನ ಜೈಲಿನಿಂದ 35 ವರ್ಷಗಳ ಸುದೀರ್ಘಕಾಲದ ಬಳಿಕ ಮುಕ್ತಿಸಿಕ್ಕಿತು. ಆದರೆ ಪಾಕಿಸ್ತಾನ ಜೈಲಿನಲ್ಲಿರುವ ಇನ್ನೋರ್ವ ಭಾರತೀಯ ಪ್ರಜೆ, ಬಹು ಚರ್ಚೆಗೀಡಾಗಿದ್ದ ಸರಬ್ಜಿತ್ ಅಲಿಯಾಸ್ ಮಂಜಿತ್ ಸಿಂಗ್ನ ಕ್ಷಮಾದಾನ ಅರ್ಜಿಯನ್ನು ಪಾಕ್ ಅಧ್ಯಕ್ಷ ಮುಶರಫ್ ತಳ್ಳಿಹಾಕಿದ್ದಾರೆನ್ನಲಾಗಿದೆ.
ಸರಬ್ಜಿತ್ ಸಿಂಗ್ಗೆ 2006ರಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ಮರಣ ದಂಡನೆ ವಿಧಿಸಿದೆ. ಭಯೋತ್ಪಾದನೆ ಹಾಗೂ ಬೇಹುಗಾರಿಕೆ ಆರೋಪದಲ್ಲಿ ಸರಬ್ಜಿತ್ನನ್ನು 1990ರಲ್ಲಿ ಬಂಧಿಸಲಾಗಿತ್ತು. ಆತನಿಗೆ ಲಾಹೋರ್ ಹೈಕೋರ್ಟ್ 2003ರಲ್ಲಿ ಮರಣದಂಡನೆ ವಿಧಿಸಿತ್ತು. ಬಳಿಕ ಮೇಲ್ಮನವಿ ಸಲ್ಲಿಸಲಾಗಿದ್ದು, ಸುಪ್ರೀಂ ಕೋರ್ಟ್ ಮರಣದಂಡನೆ ಖಾಯಂಗೊಳಿಸಿತ್ತು.
ಭಾರತೀಯ ಬೇಹುಗಾರಿಕಾ ಸಂಸ್ಥೆ 'ರಾ'ದ ಏಜೆಂಟ್ ಎಂಬ ಆರೋಪಕ್ಕೆ ಈಡಾಗಿರುವ ಸರಬ್ಜಿತ್ ಪಾಕ್ ನ್ಯಾಯಾಲಯದೆದುರು ತನ್ನ ಹೆಸರನ್ನು ಬದಲಿಸಿರುವುದನ್ನು ಒಪ್ಪಿಕೊಂಡಿದಾಗಿ ಪಾಕ್ ಪತ್ರಿಕೆ ಡೇಲಿ ಟೈಮ್ಸ್ ವರದಿ ಮಾಡಿದೆ.
ಸರಬ್ಜಿತ್, ಬಾಂಬ್ ಸ್ಫೋಟ ಹಾಗೂ ಇತರ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿರುವುದಾಗಿ ಈತ ವಿಚಾರಣೆ ವೇಳೆ ಒಪ್ಪಿಕೊಂಡಿರುವುದನ್ನು ಅದೇ ವರದಿ ಹೇಳಿದೆ. ಇದೀಗ ಮುಶರಫ್ ಕ್ಷಮಾದಾನ ಅರ್ಜಿಯನ್ನು ನಿರಾಕರಿಸಿರುವುದರಿಂದ ಯಾವುದೆ ವೇಳೆ ಕಪ್ಪುವಾರಂಟ್ ಹೊರಡಿಸಬಹುದೆಂದು ಪತ್ರಿಕಾ ವರದಿ ತಿಳಿಸಿದೆ.
|