ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರ ಖಾರವಾದ ಎಚ್ಚರಿಕೆಗೆ ತಿರುಗೇಟು ನೀಡಿರುವ ಪಾಕಿಸ್ತಾನ ಯಾವುದೇ ದಾಳಿಗಳನ್ನು ಎದರಿಸಲು ನಮ್ಮ ಪಡೆಗಳೂ ಸರ್ವ ಸನ್ನದ್ಧವಾಗಿವೆ ಎಂದು ಹೇಳಿದೆ. ಭಾರತದ ಭಾನುವಾರದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭಾರತದ ಹೇಳಿಕೆಗೆ ತಿರುಗೇಟು ನೀಡುವ ಮೂಲಕ ಯುದ್ಧ ಸನ್ನಿಹಿತವಾದಂತಾಗಿದೆ.ನಾವು ಶಾಂತಿಯನ್ನು ಬಯಸುತ್ತೇವೆ. ಆದರೆ ನಮ್ಮ ಮೇಲೆ ಯುದ್ಧ ಹೂಡಿದಲ್ಲಿ ನಮ್ಮನ್ನು ನಾವು ಸಮರ್ಥಿಸಿಕೊಳ್ಳಲಿದ್ದೇವೆ ಎಂದು ಖುರೇಷಿ ಹೇಳಿದ್ದಾರೆ.ನಾವು ಭಾರತಕ್ಕೆ ಸಂಪೂರ್ಣ ಸಹಕಾರ ನೀಡಲು ಸಿದ್ದವಾಗಿದ್ದೇವೆ. ಆದರೆ ಭಾರತವು ದೃಢವಾದ ಪುರಾವೆಗಳನ್ನು ನೀಡಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ. ಅಲ್ಲಗಳೆಯುತ್ತಾ ಕಾಲಕಳೆಯಬೇಡಿ ಪಾಕಿಸ್ತಾನದ ವಿರುದ್ಧ ಕಠಿಣ ಹೆಜ್ಜೆ ಇಡುವ ಸೂಚನೆ ನೀಡಿರುವ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾನುವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಎಲ್ಲಾ ಕ್ರಮಗಳ ಆಯ್ಕೆಯನ್ನು ಮುಕ್ತವಾಗಿಸಿರುವುದಾಗಿ ಹೇಳಿದ್ದರು.ನಾವು ಪಾಕಿಸ್ತಾನಕ್ಕೆ ಈಗಾಗಲೇ ಸಾಕಷ್ಟು ಪುರಾವೆಗಳನ್ನು ನೀಡಿದ್ದೇವೆ ಎಂದು ಹೇಳಿದ ಪ್ರಣಬ್, ಈ ಪುರಾವೆಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ನಿಜ ವಿಚಾರಗಳನ್ನು ಅಲ್ಲಗಳೆಯುತ್ತಾ ಕಾಲಕಳೆಯುವುದನ್ನು ನಿಲ್ಲಿಸಿ, ಕ್ರಮಕೈಗೊಳ್ಳಲು ಮುಂದಾಗಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿರುವ ಪ್ರಣಬ್, "ನಿಮ್ಮ ಆ ಎಲ್ಲ ನಿರಾಕರಣೆಗಳಿಗೆ ಸಿಕ್ಕಿಬೀಳಲಿದ್ದೀರಿ" ಎಂದು ಎಚ್ಚರಿಕೆ ನೀಡಿದ್ದಾರೆ.ಇದೀಗಾಗಲೇ ನೀಡಿರುವ ಪುರಾವೆಗಳ ಕುರಿತು ಕಾರ್ಯ ಕೈಗೊಂಡು ಮತ್ತೆ ಪಾಕಿಸ್ತಾನ ಮಾತನಾಡಲಿ ಎಂದವರು ಹೇಳಿದ್ದಾರೆ.ಭಾರತವು ಸಾಧ್ಯವಿರುವ ಎಲ್ಲಾ ಪರ್ಯಾಯಗಳನ್ನು ಪರಿಗಣಿಸಲಿದೆ ಎಂದು ಹೇಳಿರುವ ಪ್ರಣಬ್, ಪಾಕಿಸ್ತಾನದ ಮೇಲೆ ಏರಿ ಹೋಗುವ ಎಲ್ಲಾ ಸೂಚನೆಗಳನ್ನು ನೀಡಿದ್ದರು. |