ಲಾಹೋರ್ನಲ್ಲಿ ಶ್ರೀಲಂಕಾ ಆಟಗಾರರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಲಷ್ಕರ್ ಇ ತೊಯ್ಬಾದ ಕೈವಾಡ ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ವರದಿಯೊಂದು ತಿಳಿಸಿದ್ದು, ನಿಷೇಧದ ಬಳಿಕ ಭೂಗತವಾಗಿದ್ದ ಲಷ್ಕರ್ ಗುಂಪು ಈ ದುಷ್ಕತ್ಯ ಎಸಗಿದೆ ಎಂದು ತಿಳಿಸಿದೆ.
ಕಳೆದ ಮಂಗಳವಾರ ಲಾಹೋರ್ ಗಢಾಫಿ ಸ್ಟೇಡಿಯಮ್ನತ್ತ ಬಸ್ನಲ್ಲಿ ತೆರಳುತ್ತಿದ್ದ ಶ್ರೀಲಂಕಾ ಆಟಗಾರರ ಮೇಲೆ ಉಗ್ರರು ಏಕಾಏಕಿ ಗುಂಡು ಹಾಗೂ ಗ್ರೆನೇಡ್ ದಾಳಿ ನಡೆಸಿದ್ದರು. ಘಟನೆಯಲ್ಲಿ ಆರು ಮಂದಿ ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿ, ಕೆಲವು ಕ್ರಿಕೆಟಿಗರು ಗಾಯಗೊಂಡಿದ್ದರು.
ಘಟನೆಯ ಕುರಿತು ಪಾಕ್ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿ ಪ್ರಕಾರ ದಾಳಿಯ ಹಿಂದೆ ಲಷ್ಕರ್ ಕಾರ್ಯಕರ್ತರ ಕೈವಾಡ ಇದೆ. ಭೂಗತವಾಗಿರುವ ಲಷ್ಕರ್ ಸಂಘಟನೆ ಮತ್ತು ಜಮಾತ್ ಉದ್ ದವಾ ಕೂಡ ಶಾಮೀಲಾಗಿರುವುದಾಗಿ ಡಾನ್ ದೈನಿಕದ ವರದಿ ಹೇಳಿದೆ.
ಆದರೆ ದಾಳಿಯ ಹಿಂದೆ ಲಷ್ಕರ್ ಕೈವಾಡ ಇರುವ ಕುರಿತು ಅಧಿಕಾರಿಗಳು ಯಾವುದೇ ಖಚಿತ ಮಾಹಿತಿ ನೀಡಿಲ್ಲ ಎಂದು ವರದಿ ವಿವರಿಸಿದೆ. ಅಲ್ಲದೇ ಲಾಹೋರ್ ದಾಳಿಯ ಹಿಂದೆ ಭಾರತದ ರಾ ಆಗಲಿ ಶ್ರೀಲಂಕಾದ ಎಲ್ಟಿಟಿಇ ಶಾಮೀಲಾತಿ ಇರುವುದನ್ನು ಪಾಕ್ ಈಗಾಗಲೇ ತಳ್ಳಿಹಾಕಿದೆ ಎಂದು ವರದಿ ತಿಳಿಸಿದೆ.
ಶ್ರೀಲಂಕಾ ಕ್ರಿಕೆಟಿಗರ ಮೇಲೆ ದಾಳಿ ನಡೆಸಿರುವ ದಾಳಿಕೋರರಿಗೆ ಲಷ್ಕರ್ ಕಮಾಂಡರ್ ಜಾಕಿರ್ ರೆಹಮಾನ್ ಲಕ್ವಿ ನೇತೃತ್ವದಲ್ಲಿ ತರಬೇತಿಯನ್ನೂ ನೀಡಲಾಗಿತ್ತು ಎಂದು ಶಂಕಿಸಲಾಗಿದೆ. ಲಕ್ವಿ ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದ. |