ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ ಪಾಕಿಸ್ತಾನ ಆಂತರಿಕ ಭದ್ರತೆಯ ಬೆದರಿಕೆಯನ್ನು ಎದುರಿಸುತ್ತಿರುವುದು ಮತ್ತಷ್ಟು ಸ್ಪಷ್ಟವಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೂಸೆಲ್ಸ್ನಲ್ಲಿ ನಡೆಯುತ್ತಿರುವ ನ್ಯಾಟೋ ವಿದೇಶಾಂಗ ಸಚಿವರುಗಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಬೈ ದಾಳಿಯ ಬಳಿಕ ಲಾಹೋರ್ನಲ್ಲಿ ಮತ್ತೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಗೆಗಿನ ಪ್ರಸ್ತಾಪವನ್ನು ಅಂತಾರಾಷ್ಟ್ರೀಯ ಉನ್ನತ ಮಟ್ಟದ ಸಭೆಗೆ ರವಾನಿಸಿರುವುದಾಗಿ ಹೇಳಿದರು.
ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಉತ್ತಮ ಅವಕಾಶ ದೊರೆಯಲಿದೆ ಎಂಬ ನಿರೀಕ್ಷೆ ಹೊಂದಿರುವುದಾಗಿ ಕ್ಲಿಂಟನ್ ತಿಳಿಸಿದರು.
ಪಾಕಿಸ್ತಾನದ ಗಡಿಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆ ನಿಗ್ರಹಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. 9/11ರ ದಾಳಿ ಸಂಚಿನ ಪ್ರಮುಖ ಯೋಜನೆ ನಡೆದಿರುವುದೇ ಅಲ್ಲಿನ ಉಗ್ರಗಾಮಿಗಳಿಂದ, ಅದೇ ರೀತಿ ಮಾಡ್ರಿಡ್, ಲಂಡನ್ನಲ್ಲಿನ ಬಾಂಬ್ ದಾಳಿ, ಬೇನಜೀರ್ ಹತ್ಯೆ ಹಾಗೂ ಮುಂಬೈ ದಾಳಿಯ ಕೇಂದ್ರ ಬಿಂದು ಪಾಕ್ ಗಡಿಭಾಗ ಆಗಿದೆ ಎಂದು ಹೇಳಿದರು. |