ಪಾಕಿಸ್ತಾನ ವಾಯವ್ಯ ನಗರ ಪೇಶಾವರದ ಪ್ರಾಂತೀಯ ಸಚಿವರನ್ನು ಹತ್ಯೆ ಮಾಡುವ ವಿಫಲ ಯತ್ನದಲ್ಲಿ ನಾಲ್ಕು ಜನರು ಹತರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಉಗ್ರಗಾಮಿಗಳ ಹಿಂಸಾಚಾರದಿಂದ ತತ್ತರಿಸಿರುವ ವಾಯವ್ಯ ಮುಂಚೂಣಿ ಪ್ರಾಂತ್ಯದ ಹಿರಿಯ ಸಚಿವ ಬಷೀರ್ ಬಿಲೌರ್ ಹತ್ಯೆ ಯತ್ನದಿಂದ ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ.
ಅಭಿವೃದ್ಧಿ ಯೋಜನೆಯೊಂದನ್ನು ಉದ್ಘಾಟಿಸಲು ದಟ್ಟಣೆಯ ನೆರೆಯ ಪ್ರದೇಶಕ್ಕೆ ಸಚಿವರು ಭೇಟಿ ನೀಡಿದಾಗ ಯುವಕನೊಬ್ಬ ಹಾರಿ ಅವರತ್ತ ಗ್ರೆನೇಡ್ ಎಸೆದಿದ್ದರಿಂದ ಒಬ್ಬ ಸತ್ತು ಇಬ್ಬರು ಗಾಯಗೊಂಡರು. ದಾಳಿಕೋರ ಸ್ವತಃ ಸ್ಫೋಟಿಸಿಕೊಳ್ಳಲು ಯತ್ನಿಸಿದನಾದರೂ, ಆತ್ಮಾಹುತಿ ಕವಚ ಸ್ಫೋಟಿಸಲು ವಿಫಲವಾಯಿತೆಂದು ಹೇಳಲಾಗಿದೆ.
ಗ್ರೆನೇಡ್ ಎಸೆದ ಬಳಿಕ ದುಷ್ಕರ್ಮಿಯು ಇಕ್ಕಟ್ಟಾದ ಬೀದಿಯಲ್ಲಿ ತಪ್ಪಿಸಿಕೊಂಡು ಮನೆಯೊಂದರಲ್ಲಿ ಆಶ್ರಯ ಪಡೆದ. ಅಲ್ಲಿ ಸ್ಫೋಟಕಗಳನ್ನು ಸಿಡಿಸಿದಾಗ ಮನೆಯ ಮೇಲ್ಛಾವಣಿ ಕುಸಿದು ಇಬ್ಬರು ಮಹಿಳೆಯರು ಅಸುನೀಗಿದ್ದಾರೆ ಮತ್ತು ಮಗುವೊಂದು ಸೇರಿದಂತೆ ಮೂರು ಮಕ್ಕಳಿಗೆ ಗಾಯವಾಗಿದೆ. 24ರ ಪ್ರಾಯದ ದುಷ್ಕರ್ಮಿ ಬಳಿಕ ಗಾಯಗಳಿಂದ ಮೃತಪಟ್ಟನೆಂದು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಅವಾಮಿ ನ್ಯಾಷನಲ್ ಪಕ್ಷದ ಹಿರಿಯ ಸದಸ್ಯರಾದ ಬಿಲೌರ್ ಕಳೆದ ನವೆಂಬರ್ನಲ್ಲಿ ಕೂಡ ಹತ್ಯೆಯತ್ನದಿಂದ ಪಾರಾಗಿದ್ದರು. |