ಎಲ್ಟಿಟಿಇ ನಾಯಕ ಪ್ರಭಾಕರನ್ ಕುಟುಂಬ ಕೂಡ ಶ್ರೀಲಂಕಾ ಸೇನೆಯ ಗುಂಡಿನ ದಾಳಿಗೆ ಬಲಿಯಾಗಿದೆಯೆಂದು ಮಾಧ್ಯಮದ ವರದಿಗಳು ತಿಳಿಸಿವೆ.ಗುಂಡಿನ ದಾಳಿಯಲ್ಲಿ ಪ್ರಭಾಕರನ್ ಪತ್ನಿ ಮತಿವದನಿ, ಪುತ್ರಿ ಮತ್ತು ಕಿರಿಯ ಪುತ್ರ ಬಾಲಚಂದ್ರನ್ ಮೃತರಾಗಿದ್ದು ಪತ್ತೆಯಾಗಿದೆಯೆಂದು ವರದಿಗಳು ತಿಳಿಸಿವೆ.
ತಲೆಗೆ ಗುಂಡೇಟು ಹೊಕ್ಕಿರುವ ಪ್ರಭಾಕರನ್ ಪತ್ನಿ,ಪುತ್ರಿ ಮತ್ತು ಪುತ್ರನ ಮೃತದೇಹಗಳು ಪ್ರಭಾಕರನ್ ಶವದ ಚಿತ್ರವನ್ನು ಶ್ರೀಲಂಕಾ ಬಿಡುಗಡೆ ಮಾಡಿದ ಮರುದಿನವೇ ಪತ್ತೆಯಾಗಿವೆ. ಪ್ರಭಾಕರನ್ ದೇಹ ಪತ್ತೆಯಾದ ಕೇವಲ 600 ಕಿಮೀ ದೂರದ ನಾಂಡಿ ಕಡಾಲ್ನಲ್ಲಿ ಅವರ ದೇಹಗಳನ್ನು ಸೇನೆ ಪತ್ತೆಹಚ್ಚಿದೆ.
ಬಾಲಚಂದ್ರನ್ ಕೇವಲ 13 ವರ್ಷ ವಯಸ್ಸಿನ ಬಾಲಕನಾಗಿದ್ದು ಈ ಹಿಂದೆ ನಂಬಲಾಗಿದ್ದಂತೆ ಪ್ರಭಾಕರನ್ ಪತ್ನಿ, ಪುತ್ರಿ ಯುರೋಪ್ನಲ್ಲಿಲ್ಲದೇ ತಮಿಳು ವ್ಯಾಘ್ರ ಮುಖ್ಯಸ್ಥನ ಜತೆಯಲ್ಲೇ ಇದ್ದರೆಂದು ತಿಳಿದುಬಂದಿದೆ. ಎಲ್ಟಿಟಿಇ ನಾಯಕ ಪ್ರಭಾಕರನ್ ಕಡೆಗಳಿಗೆಯಲ್ಲಿ ಭಾರತ ಅಥವಾ ಮಲೇಶಿಯಕ್ಕೆ ಪಲಾಯನ ಮಾಡಲು ಯತ್ನಿಸಿದ್ದನೆಂಬ ವಿಷಯ ಬಹಿರಂಗವಾಗಿದೆ.
ಪ್ರಭಾಕರನ್ ಕಡೆಗಳಿಗೆಯಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ನೌಕಾದಳ ಪರಿಣಾಮಕಾರಿ ತಡೆ ವಿಧಿಸಿದ್ದರಿಂದ ಪ್ರಭಾಕರನ್ ಯತ್ನಗಳು ನಿಷ್ಫಲವಾದವು. ಶ್ರೀಲಂಕಾ ಸೇನೆಯ ಮೇಲೆ ಮೇಲುಗೈ ಸಾಧಿಸಿ ಉತ್ತರ ಯುದ್ಧವಲಯದಲ್ಲಿ ಕೊನೆಯ ಉಸಿರಿರುವ ತನಕ ಹೋರಾಡುವುದಾಗಿ ಶಪಥ ತೊಟ್ಟಿದ್ದ ಪ್ರಭಾಕರನ್ಗೆ ತಪ್ಪಿಸಿಕೊಳ್ಳುವ ಪ್ರಯತ್ನಗಳು ನಿಷ್ಫಲಗೊಂಡಿದ್ದರಿಂದ ಯಾವುದೇ ಆಯ್ಕೆಗಳು ಉಳಿದಿರಲಿಲ್ಲ.
ಬಂಡುಕೋರ ಹಿಡಿತದ ಪ್ರದೇಶಕ್ಕೆ ಶ್ರೀಲಂಕಾ ಪಡೆಗಳು ಮುನ್ನುಗ್ಗುತ್ತಿದ್ದಂತೆ ಪ್ರಭಾಕರನ್ ತಪ್ಪಿಸಿಕೊಳ್ಳಲು ಯತ್ನಿಸಿದ ಎಂದು ನೌಕಾದಳದ ವಕ್ತಾರ ದಾಸನಾಯಕೆ ಹೇಳಿದ್ದಾರೆ. |