ಉಪ ಖಂಡದ ಶಾಂತಿ ಪ್ರಕ್ರಿಯೆ ಆರಂಭಿಸುವಂತೆ ಮತ್ತು ಕಾಶ್ಮೀರ ವಿವಾದ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಈ ವಾರ ಎರಡನೇ ಬಾರಿಗೆ ಒತ್ತಾಯಿಸಿದ್ದಾರೆ. ಇಸ್ಲಾಮಾಬಾದ್ ಮತ್ತು ನವದೆಹಲಿ ನಡುವೆ ಬಿಕ್ಕಟ್ಟಿನಿಂದ ಭಯೋತ್ಪಾದಕರು ಲಾಭ ಮಾಡಿಕೊಳ್ಳುತ್ತಾರೆಂದು ಹೇಳಿದರು.
ಶಾಂತಿ ಪ್ರಕ್ರಿಯೆ ಮುರಿದುಬಿದ್ದಿದ್ದರಿಂದ ಭಯೋತ್ಪಾದಕರಿಗೆ ಅನುಕೂಲ ಎನ್ನುವುದನ್ನು ಭಾರತದ ನಾಯಕತ್ವಕ್ಕೆ ತಡವಾಗಿಯಾದರೂ ಅರಿವಾಗುತ್ತದೆಂದು ಆಶಿಸುವುದಾಗಿ ಗಿಲಾನಿ ಇಸ್ಲಾಮಾಬಾದ್ ರಾಷ್ಟ್ರೀಯ ರಕ್ಷಣಾ ವಿವಿಯಲ್ಲಿ ಹೇಳಿದರು.
ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಜಂಟಿ ಮಾತುಕತೆ ಪ್ರಕ್ರಿಯೆ ಸ್ಥಗಿತಗೊಳಿಸಿದ ಭಾರತದ ನಿರ್ಧಾರವನ್ನು ದುರದೃಷ್ಟಕರವೆಂದು ಪರಿಗಣಿಸಿದ ಅವರು, ನಾವು ಭಾರತದ ಜತೆ ಸ್ನೇಹಿ, ಸಹಕಾರಿ ಮತ್ತು ನೆರೆಹೊರೆಯ ಸಂಬಂಧ ಇಟ್ಟುಕೊಳ್ಳಲು ಬದ್ಧವಾಗಿರುವುದಾಗಿ ತಿಳಿಸಿದರು.ದಕ್ಷಿಣ ಏಷ್ಯಾವಲಯದಲ್ಲಿ ನಿರಂತರ ಶಾಂತಿ ಸ್ಥಾಪನೆಗೆ ಕಾಶ್ಮೀರ ವಿವಾದ ಸೇರಿದಂತೆ ನೆನೆಗುದಿಗೆ ಬಿದ್ದ ಎಲ್ಲ ವಿವಾದಗಳ ಪರಿಹಾರವೊಂದೇ ಮಾರ್ಗವೆಂದು ಅವರು ನುಡಿದರು.
ಭಾರತದ ಜತೆ ದ್ವಿಪಕ್ಷೀಯ ಸಂಬಂಧವನ್ನು ಅನುಮಾನಾಸ್ಪದ ಮತ್ತು ಅಪನಂಬಿಕೆಯಿಂದ ನೋಡಲಾಗುತ್ತಿದೆ. ಈ ಅಪನಂಬಿಕೆಯ ಹೃದಯದಲ್ಲಿ ಕಾಶ್ಮೀರ ವಿವಾದ ಹುದುಗಿದೆಯೆಂದು ಅವರು ವಿಷಾದ ವ್ಯಕ್ತಪಡಿಸಿದರು. |