ಶ್ರೀಲಂಕಾದಲ್ಲಿ ಯುದ್ಧಾಪರಾಧ ನಡೆದಿರುವ ಸಾಧ್ಯತೆ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸಂಶಯ ವ್ಯಕ್ತಪಡಿಸಿದ್ದು, ಸರ್ಕಾರದ ಮಿಲಿಟರಿ ಕಾರ್ಯಾಚರಣೆಯ ಪರಿಶೀಲನೆಗೆ ಅಂತಾರಾಷ್ಟ್ರೀಯ ತನಿಖೆ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದರು.
ಭದ್ರತಾ ಮಂಡಳಿ ಸದಸ್ಯರ ಜತೆ ರಹಸ್ಯಸಭೆ ನಡೆಸಿದ ಬಾನ್ ಕಿ ಮೂನ್, ಅಂತಾರಾಷ್ಟ್ರೀಯ ಬೆಂಬಲದೊಂದಿಗೆ ಮತ್ತು ಶ್ರೀಲಂಕಾ ಸರ್ಕಾರದ ಪೂರ್ಣ ಸಹಕಾರದೊಂದಿಗೆ ವಿಶ್ವಾಸಾರ್ಹ ತನಿಖೆ ನಡೆಸುವುದಕ್ಕೆ ಕರೆನೀಡಿದರು. ಆದರೆ ತನಿಖೆ ಹೇಗೆ ನಡೆಯಬೇಕೆಂದು ನಿಖರವಾಗಿ ವಿವರಣೆ ನೀಡಲು ನಿರಾಕರಿಸಿದ ಅವರು, ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳ ಗಂಭೀರ ಉಲ್ಲಂಘನೆ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ತಿಳಿಸಿದರು.
ಯಾವುದೇ ತನಿಖೆಗೆ ವಿಶ್ವಸಂಸ್ಥೆಯ ಸದಸ್ಯರ ಬೆಂಬಲವಿರಬೇಕು ಮತ್ತು ಅವು ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠವಾಗಿರಬೇಕು ಎಂದು ಬಾನ್ ವಿಶ್ವಸಂಸ್ಥೆ ಮುಖ್ಯಕಚೇರಿಯಲ್ಲಿ ವರದಿಗಾರರಿಗೆ ತಿಳಿಸಿದರು.ಉತ್ತರದಾಯಿತ್ವ ಮತ್ತು ಪೂರ್ಣ ಪಾರದರ್ಶಕತೆಯ ಅಂತಾರಾಷ್ಟ್ರೀಯ ಕರೆಗೆ ಶ್ರೀಲಂಕಾ ಸರ್ಕಾರ ಮನ್ನಣೆ ನೀಡಬೇಕೆಂದು ತಿಳಿಸಿದ ಅವರು, ಮಾನವ ಹಕ್ಕು ದಮನ ನಡೆದ ವಿಶ್ವಾಸಾರ್ಹ ಆರೋಪಗಳು ಕೇಳಿಬಂದಾಗಲೆಲ್ಲ ಸೂಕ್ತ ತನಿಖೆ ನಡೆಯಬೇಕೆಂದು ತಿಳಿಸಿದರು. |