ಕಳೆದ ವರ್ಷ ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯಲ್ಲಿ ಜಮಾತ್ ಉದ್ ದವಾ(ಜೆಯುಡಿ)ದ ವರಿಷ್ಠ ಹಫೀಜ್ ಮೊಹ್ಮದ್ ಸಯೀದ್ ಭಾಗಿ ಎಂಬುದಕ್ಕೆ ಪಾಕಿಸ್ತಾನ ಸರ್ಕಾರ ಯಾವುದೇ ಸಾಕ್ಷಿಯನ್ನು ಒದಗಿಸದೇ ಇದ್ದ ಕಾರಣ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಲಾಹೋರ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಹಫೀಜ್ ಸಯೀದ್ ಮುಂಬೈ ದಾಳಿಯಲ್ಲಿ ಭಾಗಿ ಎಂದು ವಾದಿ ಆರೋಪ ಹೊರಿಸಿದ್ದರೂ ಕೂಡ, ನಾವು ಇಡೀ ಪ್ರಕರಣದ ಕುರಿತು ಕೂಲಂಕಷವಾಗಿ ಪರಿಶೀಲಿಸಿದಾಗ ಸಯೀದ್ ವಿರುದ್ಧ ಒಂದೇ ಒಂದು ಸಾಕ್ಷ್ಯವನ್ನು ಒದಗಿಸಿದಿರುವುದು ಗಮನಕ್ಕೆ ಬಂದಿದ್ದು ಆತನನ್ನು ಬಿಡುಗಡೆ ಮಾಡಿರುವುದಾಗಿ ಕೋರ್ಟ್ ಹೇಳಿದೆ.
ಸ್ಫೋಟ ಪ್ರಕರಣ ಕುರಿತಂತೆ ಸಯೀದ್ ಹಾಗೂ ಇನ್ನಿತರರನ್ನು ಬಂಧಿಸಿದ್ದಕ್ಕೆ ಸರಿಯಾದ ಸಾಕ್ಷಿಯನ್ನೇ ಪಾಕಿಸ್ತಾನ ಸರ್ಕಾರ ಒದಗಿಸಿಲ್ಲ ಎಂದು ಲಾಹೋರ್ ಹೈಕೋರ್ಟ್ ತ್ರಿಸದಸ್ಯ ಪೂರ್ಣಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಸಯೀದ್ ಬಿಡುಗಡೆಗೆ ಸಂಬಂಧಿಸಿದಂತೆ ಕೋರ್ಟ್ 29ಪುಟಗಳ ತೀರ್ಪಿನಲ್ಲಿ, ಸಯೀದ್ ಬಂಧನಕ್ಕೆ ಸೂಕ್ತವಾದ ಕಾರಣವನ್ನೇ ಕೊಟ್ಟಿಲ್ಲ ಎಂದು ಹೇಳಿದೆ.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸಯೀದ್ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಡಿಸೆಂಬರ್ 11ರಂದು ಬಂಧಿಸಲಾಗಿತ್ತು. ಆದರೆ ಪಾಕ್ ಸರಿಯಾದ ಸಾಕ್ಷ್ಯವನ್ನು ಒದಗಿಸದೇ ಇದ್ದ ಪರಿಣಾಮ ಲಾಹೋರ್ ಹೈಕೋರ್ಟ್ ಸಯೀದ್ನನ್ನು ಬಂಧಮುಕ್ತಗೊಳಿಸಿತ್ತು. ಸಯೀದ್ ಬಿಡುಗಡೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮುಂಬೈ ಪ್ರಕರಣವನ್ನು ಪಾಕಿಸ್ತಾನ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. |