ಸ್ವಾಟ್ ಕಣಿವೆಯಲ್ಲಿ ತಾಲಿಬಾನ್ ವಿರುದ್ಧ ಕಾರ್ಯಾಚರಣೆಯಲ್ಲಿ ಸಂತ್ರಸ್ತರಾಗಿದ್ದ ಸುಮಾರು 20 ಲಕ್ಷ ಜನರು ಮನೆಗಳಿಗೆ ಮರಳುವುದಕ್ಕೆ ಪಾಕಿಸ್ತಾನ ಸರ್ಕಾರ ನೆರವಾಗುತ್ತಿದೆ. ತಾತ್ಕಾಲಿಕ ಶಿಬಿರಗಳಿಂದ ಜನರನ್ನು ಒಯ್ಯಲು ಬಸ್ಸುಗಳ ಸಮೂಹ ಸೋಮವಾರ ಯಾತ್ರೆ ಆರಂಭಿಸಿತು. ತಾಲಿಬಾನ್ ಉಗ್ರರನ್ನು ಅಟ್ಟುವ ಕಾರ್ಯಾಚರಣೆಯಿಂದ ಪ್ರಕ್ಷುಬ್ಧವಾಗಿದ್ದ ಜಿಲ್ಲೆಗೆ ಸೇನೆ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ.
ಕೆಲವು ಸಂತ್ರಸ್ತರು ಈಗಾಗಲೇ ವಾಪಸಾಗಿದ್ದಾರೆ. ಅನೇಕ ತಿಂಗಳವರೆಗೆ ನೆರವಿನ ಮೇಲೆ ಅವರು ಅವಲಂಬಿತರಾಗುವ ಸಂಭವವಿದೆಯೆಂದು ವರದಿಗಾರರು ತಿಳಿಸಿದ್ದಾರೆ. ತಾತ್ಕಾಲಿಕ ಶಿಬಿರಗಳಲ್ಲಿರುವ ಜನರನ್ನು ಮನೆಗಳಿಗೆ ಸೇರಿಸುವುದು ತಮ್ಮ ಆದ್ಯತೆಯೆಂದು ಸರ್ಕಾರ ಹೇಳಿದೆ. ನೌಶಿರಾ ಜಿಲ್ಲೆಯಲ್ಲಿ ಶಿಬಿರಗಳಲ್ಲಿ ಬಿಡಾರ ಹೂಡಿರುವ ಸುಮಾರು 200 ಕುಟುಂಬಗಳು ಪ್ರಥಮ ಹಂತದಲ್ಲಿ ವಾಪಸಾಗಲಿದ್ದಾರೆ.
ತಾತ್ಕಾಲಿಕ ಶಿಬಿರಗಳಲ್ಲಿ ತೀವ್ರ ಉಷ್ಣಾಂಶದಿಂದ ಮನೆಗಳಿಗೆ ಹಿಂತಿರುಗಲು ಜನರು ಕಾತುರರಾಗಿದ್ದಾರೆಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಶಿಬಿರಗಳಿಂದ ಜನರನ್ನು ತೆರವು ಮಾಡಿದ ಬಳಿ ಶಾಲೆಗಳಲ್ಲಿ ಮತ್ತಿತರ ಸ್ಥಳಗಳಲ್ಲಿ ತಂಗಿರುವ ಜನರನ್ನು ಮನೆಗಳಿಗೆ ಕಳಿಸಲಾಗುತ್ತದೆ. ಮಿಂಗೋರಾ ನಗರಕ್ಕೆ ಮುಟ್ಟುವ ಲಂಡಾಕೈ-ಬಾರಿಕೋಟ್ ವಲಯದ ರಸ್ತೆಯಲ್ಲಿ ಮನೆಗಳಿಗೆ ವಾಪಸಾಗುವ ಪ್ರಥಮ ತಂಡ ಸೇರಿದೆ.
ಮಿಲಿಟರಿ ಮತ್ತು ತಾಲಿಬಾನ್ ನಡುವೆ ಹೋರಾಟದಲ್ಲಿ ತೀವ್ರ ಸಂಕಷ್ಟಕ್ಕೆ ಗುರಿಯಾದ ಜಿಲ್ಲೆ ಮಿಂಗೋರಾ ಎಂದು ಹೇಳಲಾಗಿದೆ. ಮನೆಗಳಿಗೆ ಹಿಂತಿರುಗುವ ಪ್ರಕ್ರಿಯೆಯನ್ನು ಸ್ವಾಟ್, ಮಲಕಾಂಡ್ ಮತ್ತು ಬುನೇರ್ನಲ್ಲಿ ಗಣನೀಯ ಮಿಲಿಟರಿ ಉಪಸ್ಥಿತಿ ಮೂಲಕ ಮೇಲ್ವಿಚಾರಣೆ ವಹಿಸಲಾಗುತ್ತಿದೆ.
ಸಂತ್ರಸ್ತರು ತಮ್ಮ ಮನೆಗಳಿಗೆ ಹಾನಿಯಾಗಿದ್ದು ಕಂಡುಬಂದರೆ ಅವರು ಡೇರೆಗಳನ್ನು ತಮ್ಮ ಜತೆ ಒಯ್ಯಬಹುದೆಂದು ವಾಯವ್ಯ ಪ್ರಾಂತದ ಮಾಹಿತಿ ಸಚಿವರು ತಿಳಿಸಿದ್ದಾರೆ. ವಾಹನಗಳಿಗೆ ಬೆಂಗಾವಲು ನೀಡಲು ಪ್ರಮುಖ ಸ್ಥಳಗಲ್ಲಿ ಪೊಲೀಸರು ಮತ್ತು ತುಕಡಿಗಳನ್ನು ನಿಯೋಜಿಸಲಾಗಿದೆಯೆಂದು ಮಿಯಾನ್ ಇಫ್ತಿಕರ್ ಹುಸೇನ್ ತಿಳಿಸಿದ್ದಾರೆ. |