ಮೊಹಮದ್ ಅಲಿ ಜಿನ್ನಾ ಕುರಿತು ವಿವಾದಾತ್ಮಕ ಪುಸ್ತಕ ಬರೆದು ಬಿಜೆಪಿಯ ಕೆಂಗಣ್ಣಿಗೆ ಗುರಿಯಾದ ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಕುರಿತ ತಮ್ಮ ಪುಸ್ತಕಕ್ಕೆ ಪ್ರಚಾರ ಕೊಡುವ ಸಲುವಾಗಿ ಇಸ್ಲಾಮಾಬಾದ್ಗೆ ಗುರುವಾರ ಆಗಮಿಸಲಿದ್ದಾರೆ.
ಇಸ್ಲಾಮಾಬಾದ್ ಮತ್ತು ಕರಾಚಿಗೆ ನೀಡುವ ಅವರ ಭೇಟಿಯ ಬಗ್ಗೆ ಭದ್ರತಾ ಕಾರಣಗಳಿಗಾಗಿ ಹೆಚ್ಚು ಪ್ರಚಾರ ನೀಡಿಲ್ಲ ಮತ್ತು ಆಯ್ದ ಕೆಲವೇ ಮಂದಿಗೆ ಅವರ ಭಾಷಣದ ಕಾರ್ಯಕ್ರಮಕ್ಕೆ ಆಹ್ವಾನಪತ್ರಗಳನ್ನು ನೀಡಲಾಗಿದೆಯೆಂದು ಪ್ರವಾಸದ ಆಯೋಜಕರು ತಿಳಿಸಿದ್ದಾರೆ.
ಸಿಂಗ್ ಅವರಿಗೆ ಆತಿಥ್ಯ ನೀಡಲಿರುವ ಇಸ್ಲಾಮಾಬಾದ್ ಖ್ಯಾತ ಪುಸ್ತಕದ ಅಂಗಡಿ ಮಿ.ಬುಕ್ಸ್ ನಿರ್ದೇಶಕ ಮುಹಮದ್ ಯುಸುಫ್, ಆ.27ರಂದು ಸಂಜೆ ಇಸ್ಲಾಮಾಬಾದ್ ಕ್ಲಬ್ನಲ್ಲಿ ಲೇಖಕರ ಭಾಷಣ ಕಾರ್ಯಕ್ರಮವಿದೆಯೆಂದು ತಿಳಿಸಿದರು.ಸಿಂಗ್ ಬಳಿಕ ತಮ್ಮ ಕೃತಿ 'ಜಿನ್ನಾ: ಭಾರತ-ವಿಭಜನೆ-ಸ್ವಾತಂತ್ರ್ಯ' ಪ್ರತಿಗಳಿಗೆ ಅಂಗಡಿಯಲ್ಲಿ ಸಹಿ ಹಾಕಲಿದ್ದಾರೆ.ನಾವು ಪಾಕಿಸ್ತಾನಕ್ಕೆ ಸಿಂಗ್ ಕೃತಿಗಳನ್ನು ತರಿಸಿದ ಪ್ರಥಮ ಪುಸ್ತಕಅಂಗಡಿಯಾಗಿದ್ದು, ಅವು ಬಿರುಸಿನ ಮಾರಾಟವಾಗುತ್ತಿದೆ.
ನಾವು ಈಗಾಗಲೇ 150 ಪ್ರತಿಗಳನ್ನು ಮಾರಾಟ ಮಾಡಿದ್ದು, 500 ಪ್ರತಿಗಳ ಎರಡನೇ ಸರಕು ಇಂದು ಸಂಜೆ ಬರಲಿದೆಯೆಂದು ಯುಸುಫ್ ತಿಳಿಸಿದ್ದಾರೆ.ಜಿನ್ನಾ ಒಬ್ಬರೇ ಭಾರತದ ವಿಭಜನೆಗೆ ಕಾರಣರಲ್ಲ ಎಂದು ತಮ್ಮ ಪುಸ್ತಕದಲ್ಲಿ ಮಂಡಿಸಿದ ವಾದ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿ ಕಳೆದ ವಾರ ಬಿಜೆಪಿಯಿಂದ ಉಚ್ಚಾಟನೆ ಶಿಕ್ಷೆಗೆ ಗುರಿಯಾದ ಸಿಂಗ್ ಅವರು ಆಗಸ್ಟ್ 28ರಂದು ಬಂದರು ನಗರ ಕರಾಚಿಗೆ ಪ್ರಯಾಣಿಸಲು ನಿರ್ಧರಿಸಿದ್ದಾರೆ. ಕರಾಚಿಯಲ್ಲಿ ಸಿಂಗ್ ಅವರಿಗೆ ಲಿಬರ್ಟಿ ಬುಕ್ಸ್ ಅಂಗಡಿ ಆತಿಥ್ಯ ನೀಡಲಿದ್ದು, ಅಲ್ಲಿ ಸಹ ಅವರ ಭಾಷಣದ ಕಾರ್ಯಕ್ರಮ ಮತ್ತು ಪ್ರತಿಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.