ಚೀನಾ ಮತ್ತು ಪಾಕಿಸ್ತಾನಗಳೊಂದಿಗೆ ಏಕಕಾಲದಲ್ಲಿ ಯುದ್ಧ ಮಾಡಲು ಭಾರತ ಸನ್ನದ್ಧವಾಗುವ ಕುರಿತಾದ ಭಾರತೀಯ ಸೇನಾಪಡೆಯ ಹೇಳಿಕೆ ಹಾಸ್ಯಾಸ್ಪದ ಮತ್ತು ಬೇಜವಾಬ್ದಾರಿತನದ್ದು ಎಂದು ಪಾಕಿಸ್ತಾನ ಸೋಮವಾರ ಲೇವಡಿ ಮಾಡಿದೆ.
ಮಾಧ್ಯಮಗಳಲ್ಲಿ ಈ ಕುರಿತ ವರದಿ ನೋಡಿ ನನಗೆ ಅಚ್ಚರಿಯಾಗಿತ್ತು. ನಾನಿದನ್ನು ಅಸಂಗತ ಮತ್ತು ತೀರಾ ಬೇಜವಾಬ್ದಾರಿತನದ್ದು ಎನ್ನುತ್ತೇನೆ ಎಂದು ವಿದೇಶಾಂಗ ಸಚಿವ ಶಾಹ್ ಮಹಮೂದ್ ಖುರೇಷಿ ತಿಳಿಸಿದ್ದಾರೆ.
PTI
ಭಾರತೀಯ ಸೇನಾಧಿಕಾರಿಗಳ ಇತ್ತೀಚಿನ ಹೇಳಿಕೆಗೆ ಖುರೇಷಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಚೀನಾ ಮತ್ತು ಪಾಕಿಸ್ತಾನಗಳೆರಡರ ಜತೆಗೂ ಏಕಕಾಲದಲ್ಲಿ ಯುದ್ಧ ಮಾಡುವ ಚಿತ್ರಣ ಹೇಗಿರುತ್ತದೆ ಎಂಬ ಬೋಧನೆಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಶಿಮ್ಲಾದಲ್ಲಿನ ತರಬೇತಿ ಕೇಂದ್ರದಲ್ಲಿ ಪುನರ್ ವಿಮರ್ಶೆಗೊಳಪಡುವ ಭಾರತೀಯ ಸೇನಾ ನೀತಿಗಳಲ್ಲಿ ಸೇರಿಸಲಾಗಿರುವುದನ್ನು ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಬಹಿರಂಗಪಡಿಸಿದ್ದರು.
ಭಾರತದ ಹೇಳಿಕೆಗೆ ಕೆಲವೇ ದಿನಗಳ ಹಿಂದಷ್ಟೇ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಶ್ಫಕ್ ಫರ್ವೇಜ್ ಖಯಾನಿ, ತಮ್ಮ ಸೇನೆಯು ಯಾವುದೇ ಆಕ್ರಮಣಕಾರಿ ವಿಧಾನಗಳನ್ನು ಅಥವಾ ಅನಾದರದ ಬೋಧನೆಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಹೊಂದಿದೆ ಎಂದಿದ್ದರು.
ಇದೇ ರೀತಿಯ ಪ್ರತಿಕ್ರಿಯೆ ನೀಡಿರುವ ಖುರೇಷಿ ಹೆಚ್ಚಿನ ವಿವರ ನೀಡದಿದ್ದರೂ, ಪಾಕಿಸ್ತಾನವು ಯಾವುದೇ ಒತ್ತಡದಲ್ಲಿಲ್ಲ ಮತ್ತು ಯಾವುದೇ ಒತ್ತಡವನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ.
ನಾವು ಈ ಭಾಗದಲ್ಲಿ ಶಾಂತಿಯನ್ನು ಬಯಸುತ್ತಿದ್ದೇವೆ. ನಮಗೆ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವುದು ಬೇಕಿದೆ. ನಮಗೆ ಸಮ್ಮಿಳಿತ ಮಾತುಕತೆ ಪುನರಾರಂಭವಾಗಬೇಕಾದ ಅಗತ್ಯವಿದೆ. ಪಾಕಿಸ್ತಾನವು ತನ್ನೆಲ್ಲ ನೆರೆಹೊರೆ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬಯಸುತ್ತಿದೆ ಎಂದು ಅವರು ತಿಳಿಸಿದ್ದಾರೆ.