ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ಮುಂದುವರಿಸಿರುವುದನ್ನು ಭಾರತ ತೀವ್ರವಾಗಿ ಖಂಡಿಸಿರುವ ನಡುವೆಯೇ, 'ನಮ್ಮ ದೇಶದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಅಲ್ಲದೇ ವಿಶ್ವದ ಮಹಾನಗರಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ' ಎಂದು ಹೇಳುವ ಮೂಲಕ ಆಸ್ಟ್ರೇಲಿಯಾ ಉಪ ಪ್ರಧಾನಿ ಜುಲಿಯಾ ಗಿಲ್ಲಾರ್ಡ್ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮತ್ತು ಹತ್ಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬಾರದು ಎಂದು ಭಾರತ ನೀಡಿರುವ ಸಲಹೆ ಕುರಿತಂತೆ ಪ್ರತಿಕ್ರಿಯಿಸಿರುವ ಜುಲಿಯಾ, ಆ ಎಚ್ಚರಿಕೆ ಭಾರತದ ಸರ್ಕಾರಕ್ಕೆ ಬಿಟ್ಟಿದ್ದು. ಆದರೆ ಭಾರತೀಯ ವಿದ್ಯಾರ್ಥಿಗಳು ಆಸ್ಟ್ರೇಲಿಯಾಕ್ಕೆ ಬರಲು ಮುಕ್ತ ದ್ವಾರ ಹೊಂದಿದೆ ಎಂದಿದ್ದಾರೆ.
ಎಲ್ಲಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆಸ್ಟ್ರೇಲಿಯಾ ಸುರಕ್ಷಿತ ದೇಶವಾಗಿದೆ ಎಂದಿರುವ ಉಪ ಪ್ರಧಾನಿ, ವಿಶ್ವದ ಮಹಾನಗರಗಳಲ್ಲಿ ಇಂತಹ ಹಿಂಸಾಚಾರ ಆಗಾಗ ನಡೆಯುವುದು ಸಾಮಾನ್ಯ ಎಂದಿದ್ದಾರೆ. ಇಂತಹ ಘಟನೆ ಮುಂಬೈಯಲ್ಲಿ, ನ್ಯೂಯಾರ್ಕ್, ಲಂಡನ್ಗಳಲ್ಲಿಯೂ ನಡೆಯಬಹುದಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಎಬಿಸಿ ವರದಿ ವಿವರಿಸಿದೆ.
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದಾಳಿ ಮುಂದುವರಿದಿರುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಭಾರತದ ವಿದೇಶಾಂಗ ಸಚಿವ ಎಂ.ಎಂ.ಕೃಷ್ಣ ತಿಳಿಸಿದ್ದರು. ಅಲ್ಲದೇ,ಹತ್ಯೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಭಯ ದೇಶಗಳ ನಡುವಿನ ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದಾಗಿದೆ ಎಂಬುದಾಗಿಯೂ ಎಚ್ಚರಿಕೆ ನೀಡಿದ್ದರು.