ಮುಂಬೈ ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮಿರ್ ಕಸಬ್ನನ್ನು ಭಾರತದಿಂದ ಕರೆ ತಂದು ಪಾಕಿಸ್ತಾನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಅನುವು ಮಾಡಿಕೊಡಬೇಕೆಂಬ ಮನವಿಯನ್ನು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ ಬುಧವಾರ ತಿರಸ್ಕೃರಿಸಿದೆ.
ಅಲ್ಲದೇ ವಾಣಿಜ್ಯ ನಗರಿ ಮುಂಬೈ ದಾಳಿಯ ರೂವಾರಿ ಹಾಗೂ ದಾಳಿಗೆ ಸಹಾಯ ನೀಡಿದ್ದ ಆರೋಪ ಎದುರಿಸುತ್ತಿದ್ದ ಲಷ್ಕರ್ ಇ ತೊಯ್ಬಾದ ವರಿಷ್ಠ ಜಾಕಿರ್ ರೆಹಮಾನ್ ಲಕ್ವಿ ಹಾಗೂ ಆರು ಮಂದಿಯನ್ನು ದೋಷಮುಕ್ತಗೊಳಿಸಬೇಕೆಂಬ ಮನವಿಯನ್ನೂ ಕೂಡ ನ್ಯಾಯಾಲಯ ವಜಾಗೊಳಿಸಿದೆ.
ಭದ್ರತೆಯ ಕಾರಣದಿಂದಾಗಿ ಮುಂಬೈ ದಾಳಿ ಆರೋಪಿಗಳ ವಿಚಾರಣೆಯನ್ನು ಅಡಿಯಾಲಾ ಜೈಲಿನಲ್ಲಿಯೇ ನಡೆಸಬೇಕೆಂದು ನಿರ್ದೇಶನ ನೀಡಿರುವ ನ್ಯಾಯಾಧೀಶ ಮಲಿಕ್ ಮುಹಮ್ಮದ್ ಅಕ್ರಮ್ ಅವಾನ್, ಆರೋಪಿತರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಜನವರಿ 16ರ ವಿಚಾರಣೆ ವೇಳೆ ಹಾಜರುಪಡಿಸಬೇಕೆಂದು ಸೂಚಿಸಿದರು.
ಕಳೆದ ಒಂದು ತಿಂಗಳ ಹಿಂದಷ್ಟೇ ಲಕ್ವಿ ಹಾಗೂ ಆರು ಮಂದಿ ವಿರುದ್ಧ ಅಪರಾಧ ದಂಡ ಸಂಹಿತೆ ಅನ್ವಯ ಆರೋಪ ಪಟ್ಟಿ ದಾಖಲಿಸಲಾಗಿತ್ತು. ಆದರೆ ಲಕ್ವಿ ಸೇರಿದಂತೆ ಅವರಾರು ಭಯೋತ್ಪಾದನಾ ದಾಳಿಯಲ್ಲಿ ಭಾಗವಹಿಸಿದ್ದಾರೆಂದು ಹೇಳಲು ಯಾವುದೇ ಬಲವಾದ ಪುರಾವೆಗಳಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು.