ದೀರ್ಘಕಾಲದಿಂದ ಕಾಯಿಲೆಯಿಂದ ಬಳಲುತ್ತಿದ್ದ ಎಲ್ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ತಂದೆ ತಿರುವೆಕ್ಕಾಡಂ ವೇಲುಪಿಳ್ಳೈ ಬುಧವಾರ ರಾತ್ರಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಟಿಟಿಇ ವಿರುದ್ಧ ಲಂಕಾ ಸರ್ಕಾರ ಸಾರಿದ್ದ ಸಮರದಲ್ಲಿ ವೇಲುಪಿಳ್ಳೈ ಪ್ರಭಾಕರನ್ ಹತನಾಗಿದ್ದ. ಇದೀಗ ಪ್ರಭಾಕರನ್ ತಂದೆ ಕೂಡ ಕಾಯಿಲೆಯಿಂದ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 86ರ ಹರೆಯದ ವೇಲುಪಿಳ್ಳೈ ಪತ್ನಿಯ ಜೊತೆ ವಾಸವಾಗಿದ್ದರು.
ಕಳೆದ ವರ್ಷ ಮೇ ತಿಂಗಳಿನಲ್ಲಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಎಲ್ಟಿಟಿಇ ಸೋತು ಸುಣ್ಣವಾದ ನಂತರ ತಮಿಳರ ಪ್ರಾಬಲ್ಯ ಹೊಂದಿರುವ ವಾನ್ನಿ ಪ್ರದೇಶದಲ್ಲಿ ಪ್ರಭಾಕರನ್ ತಂದೆ ಮತ್ತು ತಾಯಿ ಮಿಲಿಟರಿ ರಕ್ಷಣೆಯಲ್ಲಿದ್ದರು.
ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದ ವೇಲುಪಿಳ್ಲೈ ಸಾವನ್ನಪ್ಪಿರುವುದಾಗಿ ತಿಳಿಸಿರುವ ಆರ್ಮಿ ಅಧಿಕಾರಿಗಳು ಹೆಚ್ಚಿನ ವಿವರಣೆ ನೀಡಿಲ್ಲ.
ಪ್ರಭಾಕರನ್ ತಂದೆ ವೇಲುಪಿಳ್ಳೈ ಅವರು 1943ರಲ್ಲಿ ಸಿಲೋನ್(ಶ್ರೀಲಂಕಾ) ಸರ್ಕಾರದಲ್ಲಿ ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಸೇವೆಯನ್ನು ಆರಂಭಿಸಿದ್ದ ಅವರು ನಂತರ ಬಡ್ತಿ ಹೊಂದುವ ಮೂಲಕ ಲ್ಯಾಂಡ್ ಆಫೀಸರ್ ಆಗಿಯೂ ಕರ್ತವ್ಯ ನಿರ್ವಹಿಸುವ ಮೂಲಕ ಸುಮಾರು 39ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಆದರೆ ಪುತ್ರ ಪ್ರಭಾಕರನ್ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ಕಳೆದ ಮೂರು ದಶಕಗಳ ಕಾಲ ಶ್ರೀಲಂಕಾ ಸರ್ಕಾರದ ವಿರುದ್ಧ ಹೋರಾಡಿ, ಕೊನೆಗೂ 2009ರ ಮೇ ತಿಂಗಳಿನಲ್ಲಿ ಲಂಕಾ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತನಾಗಿದ್ದ.