ಇದೀಗ ದಮನಗೊಂಡಿರುವ ತಮಿಳು ಹುಲಿಗಳ ನಡುವಿನ ಒಡಕಿಗೆ ತಾನೇ ಕಾರಣ ಎಂಬ ವರದಿಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ಶ್ರೀಲಂಕಾ ಮಾಜಿ ಪ್ರಧಾನಿ ರಣಿಲ್ ವಿಕ್ರಮಸಿಂಘೆ, ತಮಿಳರು ಹಳೆಯದನ್ನೆಲ್ಲ ಮರೆತು ದೇಶದ ಜನಾಂಗೀಯ ವಿವಾದವನ್ನು ಬಗೆಹರಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
2005ರ ಚುನಾವಣೆ ಸಂದರ್ಭದಲ್ಲಿ ತನಗೆ ಮತ ಹಾಕದಂತೆ ಎಲ್ಟಿಟಿಇ ತಮಿಳರಿಗೆ ಸೂಚಿಸಿತ್ತು ಎಂದು ಇದೇ ಸಂದರ್ಭದಲ್ಲಿ ವಿಕ್ರಮಸಿಂಘೆ ಹೇಳಿದ್ದಾರೆ. ಇದೇ ಕಾರಣದಿಂದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಕ್ರಮಸಿಂಘೆಯವರು ಸೋಲುಂಡು, ಮಹೀಂದ್ರಾ ರಾಜಪಕ್ಷೆಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
2005ರಲ್ಲಿ ಎಲ್ಟಿಟಿಇ ಒಂದು ತಪ್ಪನ್ನು ಮಾಡಿತ್ತು. ಆದರೆ ಈಗಲಾದರೂ ಒಟ್ಟು ಸೇರಿ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸಬೇಕಿದೆ. 2005ರಲ್ಲಿ ಈ ಅವಕಾಶ ತಪ್ಪಿ ಹೋಗಿತ್ತು ಎಂದು ಯೂರೋಪ್ ಮೂಲದ ತಮಿಳು ಟೀವಿ ವಾಹಿನಿ 'ಜಿ-ಟೀವಿ'ಯೊಂದಿಗೆ (GTV) ಮಾತನಾಡುತ್ತಾ ಅವರು ಹೇಳಿದ್ದಾರೆ.
ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜತೆಗಿನ ಸಂಬಂಧವನ್ನು ಕಡಿದುಕೊಂಡ ಕರುಣಾ ಅಮ್ಮನ್ ಬಗ್ಗೆ ಪ್ರಶ್ನಿಸಿದಾಗ, ಇದು ಉಗ್ರರ ಸಂಘಟನೆಯೊಳಗಿನ ವಿಚಾರ, ಅವರಿಗೆ ಅಲ್ಲಿನ ಸಂಬಂಧ ಸಾಕೆನಿಸಿರಬೇಕು ಎಂದಷ್ಟೇ ವಿಕ್ರಮಸಿಂಘೆ ಉತ್ತರಿಸಿದ್ದಾರೆ.
ಮಾವಿಲ್ ಆರು ಘಟನೆಯ ನಂತರ ಎಲ್ಟಿಟಿಇ ನಾಶಕ್ಕೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗಿನ ಸೇನೆಯ ಕಮಾಂಡರ್ ಹಾಗೂ ಪ್ರಸಕ್ತ ಅಧ್ಯಕ್ಷೀಯ ಅಭ್ಯರ್ಥಿ ಜನರಲ್ ಸರತ್ ಫೊನ್ಸೇಕಾ ಅವರಿಗೆ ಸರಕಾರ ಆದೇಶ ನೀಡಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.