ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದಾಳಿ ಯಥಾ ರೀತಿಯಲ್ಲಿ ಮುಂದುವರಿದಿದ್ದು, ಭಾರತೀಯ ಟ್ಯಾಕ್ಸಿ ಚಾಲಕನೊಬ್ಬನಿಗೆ ಚೂರಿಯಿಂದ ಇರಿದ ಘಟನೆ ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಬಾಲಕ್ಲಾವಾದ ಹೊರವಲಯದಲ್ಲಿ 30ರ ಹರೆಯದ ಭಾರತೀಯ ಟ್ಯಾಕ್ಸಿ ಡ್ರೈವರ್ಗೆ ಮುಸುಕುಧಾರಿ ವ್ಯಕ್ತಿಯೊಬ್ಬ ಚೂರಿಯಿಂದ ಇರಿದ ಘಟನೆ ನಡೆದಿದೆ.
ಈ ಘಟನೆ ಡಿಸೆಂಬರ್ ತಿಂಗಳಿನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ಟ್ರೇಲಿಯನ್ ಪ್ರಜೆಯಿಂದ ದಾಳಿಗೊಳಗಾದ ವ್ಯಕ್ತಿಯನ್ನು ರವೀಂದರ್ ಸಿಂಗ್ ಎಂದು ಪೊಲೀಸರು ಶಂಕಿಸಿದ್ದಾರೆ. ಟ್ಯಾಕ್ಸಿ ಚಾಲಕನಾಗಿರುವ ಸಿಂಗ್ ಶ್ವಾಸಕೋಶಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿರುವುದಾಗಿ ವಿವರಿಸಿದ್ದಾರೆ.
ಡಿಸೆಂಬರ್ 9ರಂದು ಬ್ರುನ್ಸ್ವಿಕ್ನ ಕೋಲ್ಲಿಯರ್ ಬೀದಿಯಲ್ಲಿ ಭಾರತೀಯ ಟ್ಯಾಕ್ಸಿ ಚಾಲಕನ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಇದು ಜನಾಂಗೀಯ ದಾಳಿ ಅಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಸೀಸ್ನಲ್ಲಿ ನಿರಂತರವಾಗಿ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಹಲ್ಲೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಆಸ್ಟ್ರೇಲಿಯಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನು ತಡೆಗಟ್ಟದಿದ್ದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಶಿಕ್ಷಣ, ಪ್ರವಾಸೋದ್ಯಮ ವಿನಿಮಯಕ್ಕೆ ಧಕ್ಕೆಯಾಗಬಹುದು ಎಂದು ಕೂಡ ಎಚ್ಚರಿಸಿದ್ದಾರೆ.