ವಾಣಿಜ್ಯ ನಗರಿ ಮುಂಬೈ ಮೇಲಿನ 26/11ದಾಳಿಯ ಪ್ರಮುಖ ರೂವಾರಿ ಎಂದು ಶಂಕಿಸಲಾಗಿರುವ ಎಲ್ಇಟಿ ಕಮಾಂಡರ್ ಜಾಕೀರ್ ರೆಹಮಾನ್ ಲಖ್ವಿ ತನ್ನ ವಿರುದ್ಧದ ಪ್ರಕರಣದ ವಿಚಾರಣೆಯ ವರ್ಗಾವಣೆ ಅರ್ಜಿಯನ್ನು ಪಾಕಿಸ್ತಾನ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ತನಗೆ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ ತನ್ನ ವಿರುದ್ಧದ ಪ್ರಕರಣದ ವಿಚಾರಣೆಯನ್ನು ರಾವಲ್ಪಿಂಡಿಯಿಂದ ಲಾಹೋರ್ಗೆ ವರ್ಗಾಯಿಸಬೇಕು ಎಂದು ಕೋರಿ ಲಖ್ವಿ ಇಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದ.
ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಲಾಹೋರ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಖ್ವಾಜಾ ಮೊಹಮ್ಮದ್ ಷರೀಫ್, ವಿಚಾರಣೆಯನ್ನು ಲಾಹೋರ್ಗೆ ವರ್ಗಾಯಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಈ ಮೊದಲು ಪ್ರಕರಣದ ವರ್ಗಾವಣೆಯನ್ನು ಕೋರಿ ಸಲ್ಲಿಸಿದ್ದ ಲಖ್ವಿ ಅರ್ಜಿಯ ವಿಚಾರಣೆಯ ತೀರ್ಪನ್ನು ನ್ಯಾಯಾಧೀಶರು ಶುಕ್ರವಾರಕ್ಕೆ ಕಾಯ್ದಿರಿಸಿದ್ದರು.