ನಿರಾಶ್ರಿತ ಶಿಬಿರಗಳಲ್ಲಿರುವ ಶ್ರೀಲಂಕಾ ತಮಿಳರು ಹೊಂದಿರುವ ಗುರುತು ಚೀಟಿಯನ್ನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಲು ಬಳಸಬಹುದು ಎಂದು ಲಂಕಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ ಶ್ರೀಲಂಕಾವು ಉತ್ತರ ಭಾಗದಲ್ಲಿರುವ ಯುದ್ಧ ಸಂತ್ರಸ್ತ ತಮಿಳರತ್ತ ಮೃದುಭಾವ ತೋರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
ನಿರಾಶ್ರಿತ ಶಿಬಿರಗಳಲ್ಲಿ ತಮಿಳರಿಗೆ ನೀಡಲಾಗಿರುವ ಗುರುತಿನ ಚೀಟಿಯನ್ನೇ ಅವರು ಮುಂಬರುವ ಜನವರಿ 26ರ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಬಳಸಬಹುದಾಗಿದೆ ಎಂದು ಶ್ರೀಲಂಕಾ ಚುನಾವಣಾ ಆಯುಕ್ತ ದಯಾನಂದ ದಿಸ್ಸಾನಾಯಕೆ ತಿಳಿಸಿದ್ದಾರೆ.
ದೇಶದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಆಂತರಿಕವಾಗಿ ನೆಲೆ ಕಳೆದುಕೊಂಡಿರುವವರಿಗೆ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇತರ ವ್ಯವಸ್ಥೆಗಳನ್ನು ಕೂಡ ಪೂರೈಸಲಾಗುತ್ತದೆ. ಇದರೊಂದಿಗೆ ಅವರು ಕೂಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬಹುದಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ವಿಮಾನ ನಿರೋಧಕ ಶಸ್ತ್ರಾಸ್ತ್ರ ಪತ್ತೆ... ಎಲ್ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯೊಂದಿಗೆ ನಿರ್ನಾಮವಾದ ತಮಿಳು ಹುಲಿಗಳು ಹೊಂದಿದ್ದ ವ್ಯವಸ್ಥೆಗಳು ಒಂದೊಂದೇ ಪತ್ತೆಯಾಗುತ್ತಿವೆ. ಎಲ್ಟಿಟಿಇ ಜತೆಗಿನ ಸಮರ ಮುಗಿದ ಎಂಟು ತಿಂಗಳ ಬಳಿಕ ಬಳಿಕ ಇದೀಗ ಬಂಡುಕೋರರಿಗೆ ಸೇರಿದ ವಿಮಾನ ಹೊಡೆದುರುಳಿಸುವ ಶಸ್ತ್ರಾಸ್ತ್ರಗಳ ರಾಶಿಯನ್ನೇ ಶ್ರೀಲಂಕಾ ಪತ್ತೆ ಹಚ್ಚಿದೆ.
ಕೆಲವು ಸಮಯದ ಹಿಂದಷ್ಟೇ ಶ್ರೀಲಂಕಾವು ಭೂಮಿಯಲ್ಲಿ ಹುಗಿದಿಟ್ಟಿದ್ದ ಇಂತಹುದೇ ಹಲವು ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚಿತ್ತು. 15 ಅಡಿ ಆಳದಲ್ಲಿ 25ಕ್ಕೂ ಹೆಚ್ಚು ವಿಮಾನ ನಿರೋಧಕ ಬಂದೂಕುಗಳನ್ನು ಸೇನೆ ಪತ್ತೆ ಮಾಡಿತ್ತು.