ಭಾರತ ಪ್ರಧಾನಿ ಜತೆಗಿನ ಭೇಟಿ ಇನ್ನೂ ನಿಗದಿಯಾಗಿಲ್ಲ: ಗಿಲಾನಿ
ಇಸ್ಲಾಮಾಬಾದ್, ಮಂಗಳವಾರ, 20 ಏಪ್ರಿಲ್ 2010( 17:55 IST )
ಇದೇ ಮಾಸಾಂತ್ಯದಲ್ಲಿ ಭೂತಾನ್ನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಗೆ ಪಾಕಿಸ್ತಾನ ಮತ್ತು ಭಾರತದ ಪ್ರಧಾನ ಮಂತ್ರಿಗಳು ಹಾಜರಾಗಲಿದ್ದಾರೆ. ಆದರೆ ಈ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರ ಜತೆಗೆ ಮಾತುಕತೆ ನಿಗದಿ ಇದುವರೆಗೂ ನಡೆದಿಲ್ಲ ಎಂದು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ಮುಂಬೈ ಭಯೋತ್ಪಾದನಾ ದಾಳಿಯ ನಂತರ ಸಮಗ್ರ ಮಾತುಕತೆ ಮುರಿದು ಬಿದ್ದಿರುವುದಕ್ಕೆ ವಿಷಾದಿಸಿರುವ ಗಿಲಾನಿ, ದುರ್ಘಟನೆಗೆ ಕಾರಣರಾಗಿರುವ ಪಿತೂರಿದಾರರನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸುವ ಭರವಸೆಯನ್ನು ತನ್ನ ದೇಶವು ಭಾರತಕ್ಕೆ ನೀಡುತ್ತಿದೆ ಎಂದು ಹೇಳಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಏಪ್ರಿಲ್ 28 ಮತ್ತು 29ರಂದು ನಡೆಯಲಿರುವ ಭೂತಾನ್ ಸಾರ್ಕ್ ಶೃಂಗ ಸಭೆಯ ಸಂದರ್ಭದಲ್ಲಿ ಭಾರತ ಪ್ರಧಾನಿಯ ಜತೆಗೆ ಮಾತುಕತೆ ನಡೆಸುವ ಬಗ್ಗೆ ಇದುವರೆಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ. ಯಾವುದೇ ದಿನವನ್ನು ನಿಗದಿಪಡಿಸಲಾಗಿಲ್ಲ. ಭೂತಾನ್ ಭೇಟಿಯ ಸಂದರ್ಭದಲ್ಲಿ ಏನಾಗುತ್ತೋ ನೋಡೋಣ ಎಂದು ಫ್ರೆಂಚ್ ಪತ್ರಿಕೆ 'ಲೇ ಫಿಗಾರೋ' ಜತೆಗಿನ ಸಂದರ್ಶನದಲ್ಲಿ ಗಿಲಾನಿ ಹೇಳಿದ್ದಾರೆ.
ಭಾರತದ ಜತೆಗಿನ ಸಮಗ್ರ ಮಾತುಕತೆ ಸಂಬಂಧ ನಾವು ಶಾಂತ ರೀತಿಯಿಂದ ಕಾರ್ಯನಿರ್ವಹಿಸುತ್ತಿದ್ದೆವು. ಆದರೆ ಮುಂಬೈ ಘಟನೆ ನಂತರ ಮಾತುಕತೆಯು ಸ್ಥಗಿತಗೊಂಡಿತು ಎಂದು ಭಾರತ-ಪಾಕ್ ಸಂಬಂಧದ ಕುರಿತು ವಿವರಣೆ ನೀಡಿದರು.
ಅದೇ ಹೊತ್ತಿಗೆ ಸಿಂಗ್ ಜತೆಗಿನ ಶರ್ಮ್ ಇ ಶೇಖ್ನಲ್ಲಿನ ಮಾತುಕತೆ ಸಂದರ್ಭದಲ್ಲಿ ಮತ್ತೆ ಧನಾತ್ಮಕ ನಿರೀಕ್ಷೆ ನನ್ನಲ್ಲಿ ಹುಟ್ಟಿಕೊಂಡಿತ್ತು ಎಂದು ಗಿಲಾನಿ ಹೇಳಿದ್ದಾರೆ.
ಕಳೆದ ವಾರವಷ್ಟೇ ವಾಷಿಂಗ್ಟನ್ನಲ್ಲಿ ನಡೆದಿದ್ದ ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಗಿಲಾನಿ ಮತ್ತು ಸಿಂಗ್ ಪರಸ್ಪರ ಸಂಕ್ಷಿಪ್ತ ಭೇಟಿಯಾಗಿದ್ದಾರೂ ಇಲ್ಲಿ ಯಾವುದೇ ರೀತಿಯ ಮಾತುಕತೆ ನಡೆದಿರಲಿಲ್ಲ.