ಭುಟ್ಟೋ ಹತ್ಯೆ; ಸಾಕ್ಷ್ಯ ಲಭಿಸಿದ ನಂತರ ಮುಷ್ ವಿರುದ್ಧ ಕ್ರಮ
ಇಸ್ಲಾಮಾಬಾದ್, ಮಂಗಳವಾರ, 20 ಏಪ್ರಿಲ್ 2010( 19:08 IST )
ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅವರಿಗೆ ಸೂಕ್ತ ಭದ್ರತೆ ನೀಡುವಲ್ಲಿ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ವಿಫಲರಾಗಿರುವುದಾಗಿ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ವಿಶ್ವಸಂಸ್ಥೆ ಆಯೋಗ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಮಿಲಿಟರಿ ಆಡಳಿತಗಾರ ಮುಷ್ ವಿರುದ್ಧ ದೃಢವಾದ ಪುರಾವೆ ಲಭಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸಿದೆ.
ಭುಟ್ಟೋ ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿರುವ ವಿಶ್ವಸಂಸ್ಥೆ ಆಯೋಗದ ವರದಿಯನ್ನು ನಾವು ಸ್ವಾಗತಿಸುತ್ತೇವೆ. ಯಾಕೆಂದರೆ ಅದು ಸ್ವತಂತ್ರ ಆಯೋಗ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಅಲ್ಲದೇ ಆಯೋಗ ಯಾವ ವಿಚಾರವನ್ನು ಪ್ರಮುಖವಾಗಿ ಉಲ್ಲೇಖಿಸಿದೆಯೋ ಅದನ್ನು ನಮ್ಮ ಜನರು ಮೊದಲೇ ತಿಳಿದಿದ್ದಾರೆ ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಬೇನಜಿರ್ ಭುಟ್ಟೋ ಅವರನ್ನು ಕೊಂದವರನ್ನು ಬಂಧಿಸಬೇಕೆಂಬುದು ಪಾಕ್ ಜನರ ಆಶಯವಾಗಿದೆ. ಅದು ನಮ್ಮ ಕರ್ತವ್ಯ ಕೂಡ ಆಗಿದೆ. ಆ ನಿಟ್ಟಿನಲ್ಲಿ ಆರೋಪಿತರಿಗೆ ನಾವು ಶಿಕ್ಷೆ ನೀಡುವುದು ಖಚಿತ ಎಂದು ಅವರು ಹೇಳಿದರು.
ಭುಟ್ಟೋ ಹತ್ಯಾ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವಸಂಸ್ಥೆಯ ಸ್ವತಂತ್ರ ಆಯೋಗ ಹಲವಾರು ಅಂಶಗಳನ್ನು ಈಗಾಗಲೇ ಪತ್ತೆ ಹಚ್ಚಿದ್ದು, ಭುಟ್ಟೋ ಅವರ ಜೀವಕ್ಕೆ ಅಪಾಯ ಇದೆ ಎಂಬ ಊಹಾಪೋಹ ಇದ್ದರು ಕೂಡ ಸೂಕ್ತ ಭದ್ರತೆ ನೀಡುವಲ್ಲಿ ಮುಷ್ ಆಡಳಿತ ನಿರ್ಲಕ್ಷ್ಯ ತೋರಿದೆ ಎಂಬುದನ್ನು ಆಯೋಗ ಎತ್ತಿ ತೋರಿಸಿದೆ ಎಂದು ಮಲಿಕ್ ತಿಳಿಸಿದರು.