ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈಗರ್ ಮೇಮನ್ ಆಪ್ತರಿಬ್ಬರು ಸೇರಿದಂತೆ ಆರು ಮಂದಿಗೆ ವಿಶೇಷ ಟಾಡಾ ನ್ಯಾಯಾಲಯ ಐದರಿಂದ 14ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಭಯೋತ್ಪಾದನೆ ಮತ್ತು ಸಮಾಜದಲ್ಲಿ ಭಯ ಮೂಡಿಸಿದ ಆರೋಪದಡಿಯಲ್ಲಿ ಟೈಗರ್ ಮೆಮೊನ್ ನಿಕಟವರ್ತಿಯಾದ ಶರೀಫ್ ಅಬ್ದುಲ್ ಗಫೂರ್ ಪಾರ್ಕರ್ ಹಾಗೂ ಮಗನಾದ ಮುಜಿಬ್ ಪಾರ್ಕರ್ ಇಬ್ಬರಿಗೆ ವಿಶೇಷ ಟಾಡಾ ನ್ಯಾಯಾಲಯ ಜೈಲು ಶಿಕ್ಷೆ ನೀಡಿದೆ.
ಶರೀಫ್ ಅಬ್ದುಲ್ ಗಫೂರ್ ಪಾರ್ಕರ್ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ.ಅಲ್ಲದೆ ಈ ದಂಡವನ್ನು ಪಾವತಿಸಲು ಅಸಮರ್ಥರಾದಲ್ಲಿ ಒಂದು ವರ್ಷ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಸೂಚಿಸಿದ್ದು,ಮುಜಿಬ್ ಪಾರ್ಕರ್ಗೆ ಹತ್ತು ವರ್ಷ ಜೈಲು ಮತ್ತು ಐವತ್ತು ಸಾವಿರ ದಂಡ ವಿಧಿಸಿದೆ.
1993ರ ಫೆಬ್ರುವರಿಯ 3 ಮತ್ತು 9ನೇ ತಾರೀಕಿನಂದು ರಾಯಘಡ್ ಶೇಕಾದಿ ಸೇತುವೆ ಸಮೀಪ ಶಸ್ತ್ರಾಸ್ತ್ರ ಮತ್ತು ಆರ್ಡಿಎಕ್ಸ್ ಅನ್ನು ಸಾಗಿಸಲು ಸಹಾಯ ಮಾಡಿದ ಆರೋಪ ಎದುರಿಸುತ್ತಿದ್ದರು.
ಮತ್ತೊಬ್ಬ ಟೈಗರ್ ಸಹಚರ ದಾವೂದ್ ಮೊಹಮದ್ ಪಾನ್ಸೆಗೆ ಒಂಬತ್ತು ವರ್ಷ ಜೈಲು ಮತ್ತು 25ಸಾವಿರ ರೂಪಾಯಿ ದಂಡ,ರಾಜು ಜೈನ್ ಎಂಬ ಆರೋಪಿಗೆ ಏಳು ವರ್ಷ ಜೈಲು ಹಾಗೂ ಒಂದು ಲಕ್ಷ ರೂಪಾಯಿ ದಂಡ.
ಇವರಂತೆ ಸುಲೇಮಾನ್ ಗೋಟೆ ಮತ್ತು ಸೈಯದ್ ಅಬ್ದುಲ್ ಹರೇಮಾನ್ಗೆ ಏಳು ವರ್ಷ ಜೈಲು ಹಾಗೂ 25ಸಾವಿರ ದಂಡ ವಿಧಿಸಿದೆ.
ಇದೀಗ ಮುಂಬೈ ಸ್ಫೋಟ ಪ್ರಕರಣದಲ್ಲಿ ಆರೋಪಿತರಾಗಿದ್ದ ನೂರು ಮಂದಿಯಲ್ಲಿ 28 ಮಂದಿಗೆ ನ್ಯಾಯಾಲಯ ಜೈಲು ಶಿಕ್ಷೆಯನ್ನು ನೀಡಿದ್ದು, ಬಾಲಿವುಡ್ ನಟ ಸಂಜಯ್ ದತ್ ವಿಚಾರಣೆಯ ತೀರ್ಪಿಗಾಗಿ ಎಲ್ಲರೂ ಕುತೂಹಲಗೊಂಡಿದ್ದಾರೆ.
|