ರಾಜಸ್ತಾನ ರಾಜ್ಯದಲ್ಲಿ ಪ್ರತಿಭಟನಾ ನಿರತರು ಹಾಗೂ ಪೊಲೀಸರ ನಡುವೆ ಮಂಗಳವಾರಸಂಭವಿಸಿದ ಹೊಯ್ಕೈ ಗೋಲೀಬಾರ್ ಪ್ರಕರಣ 13 ಮಂದಿಯನ್ನು ಬಲಿ ತೆಗೆದು ಕೊಂಡ ಬೆನ್ನಲ್ಲೇ ಇಂದು ಆಕ್ರೋಶಗೊಂಡ ಜನರು ಎರಡು ಫೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ.
ಪ್ರಕರಣದಲ್ಲಿ ಈ ವರೆಗೆ ಇಬ್ಬರು ಪೊಲೀಸರು ಕಾಣೆಯಾಗಿದ್ದಾರೆ. ಇವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ಬಂದಿವೆಯಾದರೂ ಇನ್ನೂ ದೃಢೀಕರಿಸಿಲ್ಲ.
ಈ ಮಧ್ಯೆ ದೋಸಾ ಜಿಲ್ಲೆಯಲ್ಲಿ ಮಾತ್ರ ಪರಿಸ್ಥಿತಿ ಉಲ್ಬಣಿಸಿದೆ, ಇನ್ನಿತರ ಬುಂದಿ ಹಾಗೂ ನಿಕಟ ಪ್ರದೇಶಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.ಆಗ್ರಾ-ಜೈಪುರ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂಬುದಾಗಿ ಸ್ಥಳೀಯ ಮಾಹಿತಿ ಲಭಿಸಿದೆ.
ಲಭ್ಯ ಮಾಹಿತಿಯಂತೆ , ರಾಜಸ್ತಾನದ ಜೈಪುರ್- ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ದೋಸಾ ಜಿಲ್ಲೆಯ ಪಿಪಲ್ಖೇರಾ ಗ್ರಾಮದ ಬಳಿ ಪ್ರಸ್ತುತ ಪ್ರಕರಣ ಸಂಭವಿಸಿತ್ತು.ಸುಮಾರು 20 ಸಾವಿರ ಮಂದಿ ಗುರ್ಜಾರ ಜನಾಂಗಕ್ಕೆ ಸೇರಿದ ದಲಿತರು ಜಮಾಯಿಸಿ ಪರಿಶಿಷ್ಟಜಾತಿ ಮೀಸಲಾತಿ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಹಿಂಸಾಚಾರ ನಡೆದಿತ್ತು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು,ಹಲವಾರು ಮಂದಿ ಗಾಯಗೊಂಡಿದ್ದರು. ಕಾಣೆಯಾಗಿರುವ ಪೊಲೀಸ್ ಸಿಬ್ಬಂದಿಗಳ ಮಾಹತಿಗಾಗಿ ಪತ್ತೆಕಾರ್ಯ ಚುರುಕುಗೊಳಿಸಲಾಗಿದೆ.
|