ಜೈಪುರ ಕೇಂದ್ರವಾಗಿರಿಸಿ ರಾಜಸ್ತಾನ ರಾಜ್ಯದಲ್ಲಿ ಗುರ್ಜರ ಜನಾಂಗದವರ ಪರವಾಗಿ ಹಿಂಸಾಚಾರ ಮುಂದುವರಿದು ಸಾವಿನ ಸಂಖ್ಯೆ 18ಕ್ಕೇರಿರುವಂತೆಯೇ, ಕೇಂದ್ರ ಸಚಿವ ಸಂಪುಟ ತುರ್ತು ಸಭೆ ಸೇರಿದೆ. ತನ್ಮಧ್ಯೆ ರಾಜ್ಯದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಪರಿಹಾರಕ್ರಮಗಳಿಗಾಗಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಮಂಗಳವಾರ ಬೆಳಗ್ಗೆ ಗುರ್ಜರ ಸಮುದಾಯದ ಸಹಸ್ರಾರು ಮಂದಿ ಜೈಪುರ ರಾಷ್ಟ್ರೀಯ ಹೆದ್ದಾರಿ ತಡೆದು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿದ್ದರು. ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆದು, ಗೋಲಿ ಬಾರ್ ಹಿಂಸಾಚಾರಗಳು ನಡೆದಿದ್ದುವು. ಇಬ್ಬರು ಪೊಲೀಸರೂ ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದರು.
ಇದರಿಂದ ಆಕ್ರೋಶಿತರಾದ ಜನರು ಹಿಂಸಾಚಾರಕ್ಕಿಳಿದು ಅಲ್ಲಲ್ಲಿ ಬೆಂಕಿ ಇಕ್ಕಲಾರಂಭಿಸಿದ್ದರು. ಪರಿಸ್ಥಿತಿ ಕೈ ಮೀರಿದಾಗ ಬುಧವಾರದಂದು ನಿಯಂತ್ರಣಕ್ಕಾಗಿ ಸೇನೆ ರಂಗ ಪ್ರವೇಶ ಮಾಡಿತ್ತು. ಗುರುವಾರದಂದು ನಡೆದ ಹಿಂಸಾಚಾರ ಭದ್ರತಾ ಸಿಬ್ಬಂದಿಗಳೊಂದಿಗಿನ ಮುಖಾಮುಖಿಯಲ್ಲಿ ಇಬ್ಬರು ಅಸುನೀಗಿದ್ದು, ಸಾವಿನ ಸಂಖ್ಯೆ 18ಕ್ಕೇರಿದೆ.
ಈ ಹಂತದಲ್ಲಿ ಕೇಂದ್ರ ಸರ್ಕಾರದ ಸಚಿವ ಸಂಪುಟ ತುರ್ತು ಸಭೆ ಸೇರಿ ರಾಜಸ್ಥಾನದ ಸ್ಥಿತಿಗತಿ ಕುರಿತು ಚರ್ಚಿಸಿದೆ. ಇದೇ ವೇಳೆ ರಾಜ್ಯದ ಮುಖ್ಯ ಮಂತ್ರಿ ವಸುಂಧರಾ ರಾಜೆ ನೇತೃತ್ವದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ.
|