ವ್ಯಕ್ತಿ ಅಕ್ರಮ ಸಾಗಣೆ ಕುರಿತಂತೆ ಬಂಧನದಲ್ಲಿರುವ ಸಂಸದ ಬಾಬುಭಾಯ್ ಕಟಾರ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ನಗರ ನ್ಯಾಯಾಲಯ ಮುಂದೂಡಿದೆ. ಈತನ ಸಹವರ್ತಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಬಾಬುಭಾಯ್ ಕಟಾರ ತನಿಖೆಗೆ ಸಂಬಂಧಿಸಿದಂತೆ ಕೆಲವು ದಿನಗಳು ಬೇಕು ಎಂದು ದೆಹಲಿ ಪೊಲೀಸರು ಸಲ್ಲಿಸಿದ ಮನವಿ ಮೇರೆಗೆ,ಕಟಾರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಧೀಶರಾದ ಕಾಮಿನಿ ಲೂ ಮುಂದೂಡಿದರು.
ತನಿಖೆಗೆ ಸಂಬಂಧಿಸಿದ ವಿವರವನ್ನು ಶನಿವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ. ಹೈದರಾಬಾದ್ ಮೂಲದ ಟ್ರಾವೆಲ್ ಏಜೆಂಟ್ ರಶೀದ್ಗೆ ಜೂನ್ 15ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕಿರಣ್ ದಾರ್ ,ಸುಂದರ್ ಲಾಲ್ ಯಾದವ್ ಹಾಗೂ ಸತ್ವಂತ್ಗೆ ಜೂನ್ 6ರಂದು ಜಾಮೀನು ನೀಡಲು ನಿರಾಕರಿಸಿತ್ತು.
ಮಾನವ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿರುವ ಸಂಸದ ಕಟಾರ ಸೇರಿದಂತೆ ಇನ್ನೂ ಹಲವಾರು ಮಂದಿ ಸಂಸದರು ಶಾಮೀಲಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದು,ಆ ನಿಟ್ಟಿನಲ್ಲಿ ಕಟಾರ ಕುರಿತು ಹೆಚ್ಚಿನ ತನಿಖೆಗೆ ಅವಕಾಶ ನೀಡಬೇಕೆಂದು ಕೋರಿದ್ದರು. ಏಪ್ರಿಲ್ 18ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾನವ ಕಳ್ಳಸಾಗಾಣಿಕೆಯಲ್ಲಿ ತೊಡಗಿದ್ದ ಸಂಸದ ಬಾಬುಭಾಯ್ ಕಟಾರ ಸೇರಿದಂತೆ ಪರಮಜಿತ್ ಕೌರ್ ಮತ್ತು 15ವರ್ಷದ ಬಾಲಕನೊಬ್ಬನನ್ನು ಬಂಧಿಸಲಾಗಿತ್ತು.
|