ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಗ್ಯಾಂಗ್ಸ್ಟರ್ ಇಝಾಜ್ ಪಠಾಣ್ ಬೃಹನ್ನಗರದ ಜೆ ಜೆ ಆಸ್ಪತ್ರೆಯಲ್ಲಿಂದು ಮೃತಪಟ್ಟಿದ್ದಾನೆ ಎಂಬುದಾಗಿ ಮೂಲಗಳು ತಿಳಿಸಿವೆ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಗಡ್ಡೆಯ ಸಮಸ್ಯೆಯಿಂದಾಗಿ ಪಠಾಣ್ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈತ ಈ ಮುನ್ನ ಭೂಗತ ವ್ಯಕ್ತಿ ದಾವೂದ್ ಇಬ್ರಾಹಿಂ ಪರ ಪಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.
ಮುಂಬೈ ಸರಣಿ ಆರೋಪದ ಪ್ರಮುಖ ಆರೋಪಿ ಪಠಾಣ್ಗೆ ಜೂನ್ 8ರಂದು ವಿಶೇಷ ಟಾಡಾ ನ್ಯಾಯಾಲಯವು 10 ವರ್ಷಗಳವಧಿಯ ಕಠಿಣ ಕಾರಾವಾಸ ಶಿಕ್ಷೆ ವಿಧಿಸಿತ್ತು. ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸೇಡು ತೀರಿಸುವ ಪ್ರಸ್ತುತ ಸರಣಿ ಸ್ಫೋಟದ ಕುರಿತಂತೆ ದುಬೈಯಲ್ಲಿ ಜರುಗಿದ ಕುಖ್ಯಾತರ ಸಂಚು ಸಭೆಯಲ್ಲಿ ಈತ ಭಾಗವಹಿಸಿದ್ದನು.
ಆ ಬಳಿಕ ಪಠಾಣ್ ತನ್ ಅನುಯಾಯಿಗಳನ್ನು ಬಳಸಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ರಾಯಗಢ ಸಮುದ್ರ ತೀರದಲ್ಲಿ ತಂದಿಳಿಸಲು ನೆರವಾಗಿದ್ದನೆಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಈತ ಜೀವಾವಧಿ ಶಿಕ್ಷೆ ಪಡೆಯುತ್ತಿದ್ದನಾದರೂ ತಂದಿಳಿಸಿದ ಸಾಮಗ್ರಿಯ ಅರಿವಿಲ್ಲ ಎಂದಿರುವುದರಿಂದ ಶಿಕ್ಷೆ ಕಡಿಮೆಯಾಗಿತ್ತು.
ಪಠಾಣ್ ದುಬೈಯಲ್ಲಿ ನೆಲೆಸಿದ್ದು ಅಲ್ಲಿಂದ ಆತನನ್ನು ಕರೆತರಲಾಗಿತ್ತು. ಸಂಚು ಆರೋಪದ ಹೊರತಾಗಿ ಅತ್ಯಾಧುನಿಕ ಎ ಕೆ 56 ನಮೂನೆ ಆಯುಧವನ್ನು ಸ್ವಾಧೀನವಿರಿಸಿದ್ದ ಪ್ರಕರಣವನ್ನೂ ಆತ ಎದುರಿಸುತ್ತಿದ್ದನು.
ಅಲ್ಲದೆ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪ್ರಮೋದ್ ಕೋಡೆ ತಿಳಿಸಿದಂತೆ ಪಠಾಣ್ನ ಕುಸಿಯುತ್ತಿರುವ ಆರೋಗ್ಯ ಮಾರಕ ರೋಗವನ್ನು ಪರಿಗಣಿಸಿ ಜೀವಾವಧಿಯಿಂದ ರಿಯಾಯ್ತಿ ಪಡೆದಿದ್ದನು. ಪಠಾಣ್ ಮಿದುಳು ಚಿಕಿತ್ಸೆಗೆ ಸರ್ಕಾರ 2.5 ಲಕ್ಷ ಹಣ ಮಂಜೂರು ಮಾಡಿತ್ತು.
|