ರಾಷ್ಟ್ರಪತಿ ಚುನಾವಣೆಗಾಗಿ ಅರ್ಹ ಅಭ್ಯರ್ಥಿಯನ್ನು ಆರಿಸಲು ಚೆನ್ನೈಯಲ್ಲಿ ಸಭೆಸೇರಿರುವ ತೃತೀಯ ರಂಗದ ಪಕ್ಷಮುಖಂಡರು ಹಾಲಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವುಗಾಗಿ ತಿಳಿದುಬಂದಿದೆ.
ತೃತೀಯರಂಗ ಪಕ್ಷಗಳು ಆದರೆ ಯಾವುದೇ ಸಂಘಟನೆಗಳು ಡಾ.ಕಲಾಂ ಅವರನ್ನು ಸಂಪರ್ಕಿಸಿ ಈ ನಿರ್ಧಾರಕ್ಕೆ ಬಂದಿವೆಯೇ ಎಂದು ಗೊತ್ತಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಕಲಾಂ ಅವರ ಪ್ರತಿಕ್ರಿಯೆ ಸದ್ಯಕ್ಕೆ ಲಭ್ಯವಾಗಿಲ್ಲ.
ಸಭೆಯಲ್ಲಿ ಎಐಎಡಿಎಂಕೆ ಅಧ್ಯಕ್ಷೆ ಜಯಲಲಿತಾ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎಸ್ಪಿ ಅಧ್ಯಕ್ಷ ಮುಲಾಯಯಂ ಸಿಂಗ್ ಯಾದವ್ ಮುಂತಾದ ಪ್ರಮುಖರು ಭಾಗವಹಿಸಿರುವರು.
ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ನಿರ್ಮಾಣವಾಗಿರುವ ತೃತೀಯ ರಂಗವು ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಆದರೆ, ಅಗತ್ಯವೆಂದಾದಲ್ಲಿ ಎನ್ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಭೈರೋನ್ ಸಿಂಗ್ ಶೆಕಾವತ್ ಅವರನ್ನಾದರೂ ಬೆಂಬಲಿಸಬಹುದು ಎಂಬುದಾಗಿ ನಾಯಕಿ ಜಯಲಲಿತಾ ತಿಳಿಸಿದ್ದಾರೆ.
ತನ್ಮಧ್ಯೆ ತೃತೀಯ ರಂಗದ ಸಭೆಯ ನಿರ್ಣಯವೇ ಅಂತಿಮ ಎಂದೆನ್ನಲಾಗಿದೆ. ಮೂರನೇ ಅಭ್ಯರ್ಥಿಯಾಗಿ ಸ್ವಂತ ರಂಗದಿಂದ ಕಣಕ್ಕಿಳಿಸಬೇಕೆ ಎಂಬ ಪ್ರಮುಖ ವಿಷಯದ ಕುರಿತೂ ಚರ್ಚಿಸಲಾಗುವುದು.
ಭಾನುವಾರ ಈ ಕುರಿತು ಸಭೆ ಸೇರಿದ ಸಮಾಜವಾದಿ ಪಕ್ಷವು ಸಂಘಟನೆಯ ಹೊಣೆಗಾರಿಕೆಯನ್ನು ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ವಹಿಸಲಾಗಿದೆ.
ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಭೈರೋನ್ ಸಿಂಗ್ ಶೆಕಾವತ್ ಅವರನ್ನು ಬೆಂಬಲಿಸುವಿರಾ ಎಂಬ ಪ್ರಶ್ನೆಗೆ ಅದು ತೃತೀಯ ರಂಗದ ಸಮಗ್ರ ನಿರ್ಧಾರ ಎಂದರು. ತೃತೀಯ ರಂಗದಲ್ಲಿ ಎಐಎಡಿಎಂಕೆ,ಟಿಡಿಪಿ, ಸಮಾಜವಾದಿ ಪಕ್ಷ,ಎಜಿಪಿ,ಐಎನ್ಡಿಎಲ್,ಕೇರಳಾಕಾಂಗ್ರೆಸ್ (ಟಿ),ಜಾರ್ಖಂಡ್ ವಿಕಾಸ್ ಮೋರ್ಛಾ,ಎಂಡಿಎಂಕೆ ಮುಂತಾದ ಪಕ್ಷಗಳಿವೆ.
|