ಭಗಲ್ಪುರದಲ್ಲಿ 1989ರಲ್ಲಿ ಸಂಭವಿಸಿದ ಭೀಕರ ಕೋಮುಗಲಭೆಯಲ್ಲಿ 116 ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿಗಳಲ್ಲಿ 14 ಮಂದಿಯನ್ನು ತಪ್ಪಿತಸ್ಥರೆಂದು ಗುರುತಿಸಿರುವ ಸ್ಥಳೀಯನ್ಯಾಯಾಲಯ, ತೀರ್ಪನ್ನು ಜೂನ್ 27ಕ್ಕೆ ಕಾದಿರಿಸಿದೆ.
ತನ್ಮಧ್ಯೆ ನ್ಯಾಯಾಲಯ ಕೃತ್ಯದ ಆರೋಪಪಟ್ಟಿಯಲ್ಲಿರುವ 14 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿದ ನಿಮಿಷಗಳ ಅಂತರದಲ್ಲಿ, ಆರೋಪಿಗಳಲ್ಲೋರ್ವನಾದ ಜಯಪ್ರಕಾಶ್ ಮಂಡಲ್ ಎಂಬಾತ ನ್ಯಾಯಾಲಯದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಭಗಲ್ಪುರ ಗಲಭೆಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 116 ಮಂದಿ ಅಂದು ದಯನೀಯ ಸಾವನ್ನಪ್ಪಿದ್ದರು. ಪ್ರಸ್ತುತ ಪ್ರಕರಣವನ್ನು ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಂಭುನಾಥ ಮಿಶ್ರ ಅವರು ಆರೋಪಿಗಳ ಅಪರಾಧಕೃತ್ಯವನ್ನು ನ್ಯಾಯಾಲಯ ಗುರುತಿಸಿರುವುದಾಗಿ ಘೋಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯದಿಂದ ಪರಾರಿಯಾಗಿರುವ ಆರೋಪಿ ಜಯ್ ಪ್ರಕಾಶನ ಪತ್ತೆ ಹಾಗೂ ಬಂಧಿಸಿ ಹಾಜರು ಪಡಿಸಲು ಹೆಚ್ಚುವರು ಜಿಲ್ಲಾ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ತಪ್ಪಿತಸ್ತರ ಯಾದಿಯಲ್ಲಿ ಕೃತ್ಯ ನಡೆದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಜಗದೀಶ್ಪುರ್ ಆರಕ್ಷಕ ಪ್ರಭಾರ ಠಾಣಾಧಿಕಾರಿ ರಾಮಚಂದ್ರ ಸಿಂಗ್ ಹಾಗೂ ಗ್ರಾಮ ಚೌಕಿದಾರ ಠಾಕೂರ್ ಪಾಸ್ವಾನ್ ಎಂಬವರೂ ಶಿಕ್ಷಾರ್ಹರಾಗಿದ್ದಾರೆ.
ಗಲಭೆಯ ವೇಳೆ ಸಂಭವಸಿದ ಹತ್ಯಾಕಾಂಡದಲ್ಲಿ 116 ಮಂದಿಯನ್ನು ಬರ್ಬರವಾಗಿ ಕೊಂದು.ಬೃಹತ್ ಹೊಂಡತೋಡಿ ಅದರಲ್ಲಿ ಧಪನ ಮಾಡಿದ್ದರಲ್ಲದೆ, ಅದರ ಮೇಲೆ ಹೂಕೋಸು ಕೃಷಿ ಬೆಳೆಸಿ, ಪುರಾವೆ ನಾಶಮಾಡಲಾಗಿತ್ತು. ಕೃತ್ಯದ ಆರೋಪ ಪಟ್ಟಿಯಲ್ಲಿರುವ 24 ಮಂದಿಯಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದರೆ, 4 ಮಂದಿ ತಲೆಮರೆಸಿದ್ದುಸ, ಇವರ ಆಸ್ತಿಪಾಸ್ತಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಲು ಆದೇಶಿಸಲಾಗಿದೆ.
|