ರಾಷ್ಟ್ರಪತಿ ಚುನಾವಣೆಯ ಬಳಿಕ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವು ಶಿವಸೇನೆಯೊಂದಿಗಿನ ಸಂಬಂಧವನ್ನು ಪುನರ್ಪರಿಶೀಲಿಸುವುದು ಎಂದು ಹಿರಿಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ಎಡರಂಗದ ಯುಪಿಎ ಒಕ್ಕೂಟದ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರನ್ನು ಬೆಂಬಲಿಸುವುದಾಗಿ ಘೋಷಿಸುವ ಮೂಲಕ ಶಿವಸೇನೆ ಮಿತ್ರದ್ರೋಹಗೈದಿದೆ ಎಂದವರು ಆರೋಪಿಸಿದ್ದಾರೆ.
ಈಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು, ಶಿವಸೇನೆಯ ಚಟುವಟಿಕೆ ನಮಗೆ ನೋವುಂಟು ಮಾಡಿದೆ, ಭವಿಷ್ಯದ ರಾಷ್ಟ್ರಪತಿ ಆಯ್ಕೆಯ ವಿಷಯದಲ್ಲಿ ಪ್ರಾದೇಶಿಕತೆಗೆ ಮಹತ್ವ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶಿವಸೇನೆ ಕುರಿತಾದ ನಿರ್ಣಯಗಳು ಚರ್ಚೆಗೆ ಬಂದುವೇ ಎಂದವರು ಉತ್ತರಿಸದೇ ಪಾರಾದರು.
ಆದರೆ ಮಹಾರಾಷ್ಟ್ರದ ಹಿರಿಯ ಮುಖಂಡರಾದ ಗೋಪಿನಾಥ ಮುಂಧೆ ಹಾಗೂ ನಿತಿನ್ ಗಡ್ಕಾರಿ ಶಿವಸೇನೆ ವಿಶ್ವಾಸ ದ್ರೋಹ ಗೈದಿದೆ ಎಂದು ಆಕ್ರೋಶಿಸಿದ್ದಾರೆ.
ಶಿವಸೇನಾ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆಯವರು ಎನ್ಡಿಎ ಬೆಂಬಲಿತ ಅಭ್ಯರ್ಥಿ ಉಪರಾಷ್ಟ್ರಪತಿ ಬೈರೋನ್ ಸಿಂಗ್ ಶೆಕಾವತ್ ಕುರಿತಂತೆ ಚೌಕಾಸಿ ರಾಜಕಾರಣ ಎಂದಿರುವಂತಹ ಮಾತುಗಳನ್ನು ನಿವಾರಿಸಬೇಕಿದೆ ಎಂದರು.
ಹೆಚ್ಚಿನ ಕುತೂಹಲಕ್ಕೆ ಅವಕಾಶ ನೀಡದ ಸ್ವರಾಜ್, ಪಕ್ಷವೀಗ ರಾಷ್ಟ್ರಪತಿ ಚುನಾವಣೆಯತ್ತ ಗಮನ ನೀಡಲಿದೆ , ಬಳಿಕ ಮುಂದಿನ ನಿರ್ಣಯ ಸ್ವೀಕರಿಸುವುದಾಗಿ ತಿಳಿಸಿದರು.
|