ರಾಜಸ್ತಾನದಲ್ಲಿ ಸುರಿಯುತ್ತಿರುವ ಮುಸಲ ಧಾರೆಮಳೆಯಿಂದಾಗಿ ಜೋಧ್ಪುರ್ನಲ್ಲಿರುವ ಜಸ್ವಂತ್ ಸಾಗರ್ ಅಣೆಕಟ್ಟು ಕುಸಿದು 40 ಗ್ರಾಮಗಳು ನೆರೆನೀರಲ್ಲಿ ಮುಳುಗಿವೆ.
ಜಸ್ವಂತ್ ಸಾಗರ್ ಅಣೆಕಟ್ಟಿನ ಮುಖ್ಯಗೋಡೆಯಲ್ಲಿ ಸಂಭವಿಸಿದ ಬಿರುಕಿನಿಂದಾಗಿ ಈ ಅನಾಹುತವುಂಟಾಗಿದ್ದು, ಸಂತ್ರಸ್ತ ಗ್ರಾಮಗಳಲ್ಲಿರುವ ಲಕ್ಷಾಂತರ ಜನ ಜೀವ, ಆಸ್ತಿ ಆತಂಕಕ್ಕೀಡಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪ್ರದೇಶ ಪ್ರವಾಹ ಪೀಡಿತವಾಗಿತ್ತು. ಅಣೆಕಟ್ಟು ಮೇರೆಮೀರಿ ಹರಿಯುತ್ತಿತ್ತು. ನಿನ್ನೆ ಸಂಜೆ ಅಣೆಕಟ್ಟಿನ ಮುಖ್ಯಗೋಡೆಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಸನಿಹದ 40 ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಲು ವಿನಂತಿಸಲಾಯಿತು.
ಅಣೆಕಟ್ಟಿನಲ್ಲಾಗಿರುವ ಆತಂಕದಿಂದಾಗಿ ಪ್ರಮುಖವಾಗಿ 8 ಮಂದಿಯನ್ನು ಹೆಲಿಕಾಪ್ಟರ್ ಬಳಸಿ ಸ್ಥಳಾಂತರಿಸಲಾಗಿದೆ.
ಶತಮಾನ ಹಳೆಯ ಅಣೆಕಟ್ಟಿನಲ್ಲಿ ಗಂಭೀರ ಸೋರಿಕೆ ಕಾಣಿಸಿದುದರಿಂದ ಬಿರಾಲಾ,ಲುನಿ ಹಾಗೂ ಜೋಧ್ ಪುರ ತಾಲೂಕಿನ ಜನರನ್ನು ಸುರಕ್ಷಿತ ಜಾಗಗಳಿಗೆ ತೆರಳಲು ವಿನಂತಿಸಲಾಯಿತು ಎಂಬುದಾಗಿ ಹೆಚ್ಚುವರು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಅಣೆಕಟ್ಟನ್ನು 1889ರ ಕಾಲದಲ್ಲಿ ನಿರ್ಮಿಸಲಾಗಿತ್ತು, ಅದೀಗ ಕುಸಿತದ ಅಂಚಿನಲ್ಲಿದೆ. ಪ್ರವಾಹದ ಕಾರಣದಿಂದ ಇದೇ ಪ್ರದೇಶದ ಮಕ್ಕಳು ಮಹಿಳೆಯರಾದಿಯಾಗಿ 13 ಮಂದಿ, ಇತರ 20 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
|