ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನದಿಂದ ದೂರವಿರಲು ನಿರ್ಧರಿಸಿರುವ ತೃತೀಯ ರಂಗದ ಕ್ರಮವನ್ನು ಅಸಾಂವಿಧಾನಿಕವೆಂದು ಘಓಷಿಸಬೇಕು ಎಂಬುದಾಗಿ ಆಗ್ರಹಿಸಿ ಎನ್ಡಿಎ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ.
ತೃತೀಯ ರಂಗ ಯುಎನ್ಪಿಎಯ ನಿರ್ಧಾರದಿಂದ ಹತಾಶರಾಗಿರುವ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಪ್ರಸ್ತುತ ಈ ನಿರ್ಧಾರ ಅಸಂವಿಧಾನಿಕ ಎಂದು ಘೋಷಿಸುವ ಹುನ್ನಾರ ನಡೆಸಿದೆ ಎನ್ನಲಾಗಿದೆ.
ಗುರುವಾರದಂದು ರಾಷ್ಟ್ರಪತಿ ಚುನಾವಣೆಯ ಮತದಾನ ನಡೆಯಲಿದ್ದು,ಈ ಸಂಬಂಧ ಮಂಗಳವಾರವೇ ತನ್ನು ನಿರ್ಧಾರ ಪ್ರಕಟಿಸುವುದಾಗಿ ಆಯೋಗ ನಿಯೋಗಕ್ಕೆ ಭರವಸೆ ನೀಡಿದೆ.
ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭೈರೋನ್ ಸಿಂಗ್ ಶೇಖಾವತ್ ಅವರನ್ನು ಎನ್ಡಿಎ ಬೆಂಬಲಿಸಿದ್ದು,ಮತದಾನಕ್ಕೆ ಗೈರು ಹಾಜರಾಗುವ ತೃತೀಯ ರಂಗದ ನಿರ್ಧಾರದಿಂದ ಶೇಖಾವತ್ ಅವರು ಗೆಲ್ಲುವ ಸಾಧ್ಯತೆಗಳು ಬಹುತೇಕ ಇಲ್ಲವಾಗಿವೆ.
ಚುನಾವಣಾ ಆಯೋಗಕ್ಕೆ ತೆರಳಿದ ನಿಯೋಗದ ನೇತೃತ್ವ ವಹಿಸಿದ್ದ ಪ್ರತಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ರಾಷ್ಟ್ರಪತಿ ಚುನಾವಣೆಯಲ್ಲಿ ಕಡ್ಡಾಯವಾಗಿ ಗೈರು ಹಾಜರಾಗುವುದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿದರು.
ತೃತೀಯ ರಂಗದ ಈ ನಿರ್ಧಾರಕ್ಕೆ ಅನುಮತಿ ದೊರೆತರೆ ಈ ಕೂಟದ ಸದಸ್ಯರು ಪ್ರತಿನಿಧಿಸುವ ದೊಡ್ಡ ಸಂಖ್ಯೆಯ ಮತದಾರರಿಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಾತಿನಿಧ್ಯ ಇಲ್ಲದಂತಾಗುತ್ತದೆ.
ಇದರಿಂದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮತದಾರರು ತಮ್ಮ ಜನಪ್ರತಿನಿಧಿಗಳ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುವ ತತ್ವಕ್ಕೂ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಮತದಾನಕ್ಕೆ ಗೈರು ಹಾಜರಾಗುವ ಪಕ್ಷಗಳ ನಿರ್ಧಾರವನ್ನು ಉಲ್ಲಂಘಿಸುವ ಜನಪ್ರತಿನಿಧಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆಯೂ ಸೂಚನೆ ನೀಡಬೇಕು ಎಂದು ಅವರು ಕೋರಿದ್ದಾರೆ.
|