ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಇಂದು ಮತ್ತೆ ಮೂರು ಮಂದಿಗೆ ಮರಣದಂಡನೆ ಶಿಕ್ಷೆ ನೀಡಿದೆ. ಇದೂ ಸೇರಿ ನಿನ್ನೆಯಿಂದೀಚೆಗೆ ಒಟ್ಟು 6 ಮಂದಿ ಮರಣದಂಡನೆ ಶಿಕ್ಷೆಗೀಡಾಗಿದ್ದಾರೆ.
ಟೈಗರ್ ಮೆಮನ್ನ ಅಧೀನ ನೌಕರ ಅಸ್ರಗ್ ಮಕ್ದುಂ ಹಾಗೂ ಶಾನವಾಜ್ ಖುರೇಶಿ ಇಂದು ಶಿಕ್ಷೆ ಗೀಡಾದ ಪ್ರಮುಖರಾಗಿದ್ದು, ಮೂರನೆಯ ವ್ಯಕ್ತಿಯನ್ನು ಮುಕ್ದುಂನ ಸಂಬಂಧಿ ಸೊಹೈಬ್ ಘಾನ್ಸಿ ಎಂದು ಗುರುತಿಸಲಾಗಿದೆ.
ಭಾರೀ ಸ್ಫೋಟಕ್ಕೆ ಕಾರಣವಾದ, ಆರ್ಡಿಎಕ್ಸ್ ತುಂಬಿದ ವ್ಯಾನನ್ನು ಪ್ಲಾಝಾ ಸಿನಿಮಾ ಥಿಯೆಟರ್ನಲ್ಲಿ ವಿನ್ಯಾಸಗೊಳಿಸಿದ ಆರೋಪವನ್ನು ಇವರು ಹೊಂದಿದ್ದಾರೆ.ಪ್ರಸ್ತುತ ಕೃತ್ಯದಲ್ಲಿ 10 ಮಂದಿ ಸಾವನ್ನಪ್ಪಿ, 36 ಮಂದಿ ಗಾಯಗೊಂಡಿದ್ದರಲ್ಲದೆ,87 ಲಕ್ಷದ ಆಸ್ತಿಪಾಸ್ತಿ ಹಾನಿಯಾಗಿತ್ತು.
ಸೊಹೈಬ್ ಆರ್ಡಿಎಕ್ಸ್ ತುಂಬಿದ ಸ್ಕೂಟರನ್ನು ಜನದಟ್ಟಣೆಯ ಜಾವೇರಿ ಬಜಾರ್ನಲ್ಲಿ ನಿಲುಗಡೆಗೊಳಿಸಿ ಸ್ಫೋಟಿಸಿದ ಪರಿಣಾಮ 17 ಮಂದಿ ಸಾವನ್ನಪ್ಪಿ,57 ಮಂದಿ ತೀವ್ರ ಗಾಯಗೊಂಡಿದ್ದರು.
ನಿನ್ನೆ ಮರಣದಂಡನೆ ಶಿಕ್ಷೆಗೊಳಗಾದ ಅಬ್ದುವಲ್ ಘನಿ ತುರ್ಕ್ ನ ಕೃತ್ಯದಿಂದಾಗಿ ವರ್ಲಿಯಲ್ಲಿ 113 ಮಂದಿ ಸಾವನ್ನಪ್ಪಿದ್ದರು. 1993ರಲ್ಲಿ ಸಂಭವಿಸಿದ ಮುಂಬೈ ಸರಮಿ ಬಾಂಬ್ಸ್ಫೋಟದಲ್ಲಿ ಒಟ್ಟು 257 ಮಂದಿ ದಾರುಣ ಸಾವುಕಂಡಿದ್ದು, 700 ಕ್ಕೂ ಹೆಚ್ಚು ಅಮಾಯಕರು ಗಾಯಗೊಂಡಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಬಾಲಿವುಡ್ ತಾರೆ ಸಂಜಯ್ ದತ್ ಸೇರಿದಂತೆ ಹಲವರು ತೀರ್ಪಿಗಾಗಿ ಕಾಯುತ್ತಿದ್ದಾರೆ. ದತ್ ಕುರಿತಾದ ತೀರ್ಪು ಹೊರಬೀಳುವ ಕುರಿತು ಎಲ್ಲೆಡೆ ಕುತೂಹಲ ಹರಡಿದೆ.
|