ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರಿಗೆ ಕುಖ್ಯಾತ ಅಲ್-ಉಮ್ಮ ಉಗ್ರಗಾಮಿ ಸಂಘಟನೆಯಿಂದ ಹತ್ಯಾಬೆದರಿಕೆ ಪತ್ರ ಲಭಿಸಿರುವ ಮಾಹಿತಿ ದಿಗ್ಭ್ರಮೆ ಮೂಡಿಸಿದೆ.
ಇತ್ತೀಚೆಗಷ್ಟೇ ಮುಸ್ಲೀಮರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಸರ್ಕಾರಿ ಸೌಲಭ್ಯ ವಿಶೇಷ ಮೀಸಲಾತಿಯನ್ನು ತಮ್ಮ ರಾಜ್ಯದಲ್ಲಿ ವಿಶೇಷವಾಗಿ ಜಾರಿಗೊಳಿಸುವ ಐತಿಹಾಸಿಕ ತೀರ್ಮಾನ ಸ್ವೀಕರಿಸಿದ ಕರುಣಾನಿಧಿಗೆ ಇಂತಹ ಬೆದರಿಕೆ ಬಂದಿರುವುದು ಕುತೂಹಲ ಮೂಡಿಸಿದೆ.
ಅಂಚೆ ಕಾರ್ಡಿನಲ್ಲಿ ಬರೆದ ಒಕ್ಕಣೆಯಂತೆ 'ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜವರಳಿಸುವ ವೇಳೆ ಮುಖ್ಯಮಂತ್ರಿ ಕರುಣಾನಿಧಿಯನ್ನು ಹತ್ಯೆಗೈಯ್ಯುವುದಾಗಿ' ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಆದರೆ ಪತ್ರದಲ್ಲಿ ನೀಡಿರುವಂತೆ ಹತ್ಯೆಬೆದರಿಕೆಗೆ ಕಾರಣವಾಗಿರುವ ವಿಷಯ ಮಾತ್ರ ಕ್ಷುಲ್ಲಕ ಎಂಬಂತಿದೆ- ಪೊಲೀಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಪ್ರಾಯಮಿತಿಯನ್ನು 24ರಿಂದ 29ಕ್ಕೇರಿಸಲು ಮುಖ್ಯಮಂತ್ರಿ ನಿರಾಕರಿಸಿರುವುದು ಪತ್ರ ಬರೆದಿರುವವರನ್ನು ರೊಚ್ಚಿಗೆಬ್ಬಿಸಿರುವುದು- ಪ್ರಕರಣಕ್ಕೆ ಕಾರಣವಾಗಿದೆ.
ಪತ್ರದ ಹೇಳಿಕೆ ಮುಂದುವರಿದಿದ್ದು- ಡಿಎಂಕೆ ಪಕ್ಷದ ಬಾವುಟವು ವಾರಕಾಲ ಅರ್ಧ ಇಳಿಸಿ ಹಾರಾಟ ನಡೆಸಬೇಕಾಗುತ್ತದೆ, 29ನೇ ತಾರೀಕಿನಂದು ( ತಿಂಗಳು ಹೆಸರಿಸಿಲ್ಲ)ಪೊಲೀಸ್ ಆಯ್ಕೆ ಜಾಗದಲ್ಲಿ ಆಸ್ಫೋಟ ನಡೆಸಲಿದೆ, ಇದು ಅಲ್ಲಾಹ್ನ ಆಜ್ಞೆ ಎಂದು ತಿಳಿಸಲಾಗಿದೆ.
|