ನಾಟಕೀಯ ವಿದ್ಯಮಾನ- ರಾಜ್ಯಪಾಲರಿಗೆ ಬಿಜೆಪಿ ಮೊರೆ ದೇಶದ ಕುತೂಹಲ ಕೆರಳಿಸಿದ ಗೋವಾದ ಬಹುಮತ ಕಳೆದುಕೊಂಡ ಮುಖ್ಯಮಂತ್ರಿ ದಿಗಂಬರ ಕಾಮತ್ ಸರ್ಕಾರ ಇಂದು ಅಪರಾಹ್ನ ಅತ್ಯಂತ ನಾಟಕೀಯ ಬೆಳವಣಿಗೆಗಳಿಂದಾಗಿ ವಿಶ್ವಾಸ ಮತಗಳಿಸುವ ಮೂಲಕ ಅಧಿಕಾರ ಉಳಿಸಿಕೊಂಡಿದೆ.
ಬಿಜೆಪಿ ನೇತೃತ್ವದ ವಿರೋಧ ಪಕ್ಷ ಶಾಸಕರ ಸಭಾ ತ್ಯಾಗದ ನಡುವೆ ಈ ವಿದ್ಯಮಾನ ಸಂಭವಿಸಿದೆ. ಐದು ಮಂದಿ ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದು ಕೊಂಡಿದ್ದ ಕಾಮತ್ ಸರ್ಕಾರ ವಿಶ್ವಾಸ ಮತಗಳಿಸಬೇಕಿತ್ತು, ತನ್ಮಧ್ಯೆ ಬಿಜೆಪಿ ತನ್ನ ಶಾಸಕ ಬಹುಮತದೊಂದಿಗೆ ಗದ್ದುಗೆ ಪಡೆಯಲು ಬಯಸಿತ್ತು.
ಇಂದು ಅಪರಾಹ್ನ 2.30 ಗಂಟೆಗೆ ಕಾಂಗ್ರೆಸ್ ಮೈತ್ರಿಕೂಟವಿರುವ ಮುಖ್ಯಮಂತ್ರಿ ದಿಗಂಬರ ಕಾಮತ್ ಸರ್ಕಾರ ವಿಧಾನಮಂಡಲದಲ್ಲಿ ತನ್ನ ಬಹುಮತವನ್ನು ಸಾಬೀತು ಪಡಿಸಬೇಕಾಗಿತ್ತು.
ಈ ಮಧ್ಯೆ ಬೆಳಗಿನ ಜಾವ ಆಡಳಿತ ಪಕ್ಷ ಕಾಂಗ್ರಸ್ ಹಾಗೂ ವಿಪಕ್ಷ ಬಿಜೆಪಿ ಒಕ್ಕೂಟಗಳು ದಾಖಲಿಸಿದ 5 ಶಾಸಕರ ಅನರ್ಹತೆ ಕೋರಿದ ಅರ್ಜಿಯನ್ನು ಸಭಾಧ್ಯಕ್ಷ ಪ್ರತಾಪ ಸಿಂಹ ರಾಣೆ ಇತ್ಯರ್ಥ ಪಡಿಸಿ, ಮೂರು ಮಂದಿಗೆ ಅನರ್ಹತೆ ಜಾರಿ ಗೊಳಿಸಿ ವಿಶ್ವಾಸ ಮತದಾನದಲ್ಲಿ ಪಾಲ್ಗೊಳ್ಳದಂತೆ ನಿರ್ಬಂದಿಸಿದ್ದರು.
ಸಭಾಧ್ಯಕ್ಷ ರಾಣೆಯವರ ನಿರ್ಧಾರದಿಂದ ಅತೃಪ್ತರಾದ ಬಿಜೆಪಿ ನೇತೃತ್ವದ ಜಿಡಿಎ ಮೈತ್ರಿಕೃತ ಸಭಾ ತ್ಯಾಗ ಮಾಡಿತು. ಈ ವೇಳೆ ವಿಶ್ವಾಸ ಮತಚಲಾವಣೆಯಲ್ಲಿ ದಿಗಂಬರ ಕಾಮತ್ ಅಗತ್ಯ ಬಹುಮತಗಳಿಸಿರುವುದಾಗಿ ಘೋಷಿಸಲಾಗಿದೆ.
ಆದರೆ, ಬಳಿಕ ರಾಜ್ಯಪಾಲ ಎಸ್ ಸಿ ಝಮೀರ್ರನ್ನು ಭೇಟಿ ಮಾಡಿದ ವಿಪಕ್ಷ ಬಿಜೆಪಿ ಮಿತ್ರಕೂಟದ ಮುಖಂಡರು ದಿಗಂಬರ ಕಾಮತ್ ಸರ್ಕಾರವನ್ನು ರದ್ದು ಪಡಿಸಬೇಕೆಂದು ಪಟ್ಟು ಹಿಡಿದರು. ಬಹುಮತ ಸಾಬೀತುಪಡಿಸುವ ಅವಕಾಶವನ್ನು ಮುಖ್ಯಮಂತ್ರಿ ಕಾಮತ್ ಸರ್ಕಾರ ನಿರಾಕರಿಸಿದೆ ಎಂದವರು ದೂರಿನಲ್ಲಿ ಆರೋಪಿಸಿದ್ದಾರೆ.
ಬಿಜೆಪಿಯು ಸಭಾಧ್ಯಕ್ಷ ಪ್ರತಾಪ ಸಿಂಹ ರಾಣೆಯ ಪುತ್ರ ಪಕ್ಷೇತರ ಅಭ್ಯರ್ಥಿ ವಿಶ್ವಜಿತ್ ರಾಣೆಯ ಅನರ್ಹತೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರೆ, ಕಾಂಗ್ರೆಸ್ ಇನ್ನೋರ್ವ ಪಕ್ಷೇತರ ಶಾಸಕ ಅನಿಲ್ ಸಲಗಾಂವ್ಕರ್ ಅನರ್ಹತೆಗೆ ಅರ್ಜಿ ಸಲ್ಲಿಸಿದ್ದರು. ಈ ರೀತಿ ಅನರ್ಹತೆ ಅರ್ಜಿ 5 ಶಾಸಕರ ವಿರುದ್ಧ ದಾಖಲಾಗಿತ್ತು.
ಅರ್ಜಿಯ ಮೇಲೆ ಮಧ್ಯಂತರ ತಾತ್ಕಾಲೀನ ಆದೇಶ ನೀಡಿದ ಸಭಾಧ್ಯಕ್ಷ ಪ್ರತಾಪ ಸಿಂಹ ರಾಣೆಯವರು, ಶಾಸಕರಾದ ಸುದೀನ್, ದೀಪಕ್ ದವಳೀಕರ್ ಹಾಗೂ ವಿಕ್ಟೋರಿಯಾ ಫೆರ್ನಾಂಡಸ್ ಇತ್ಯಾದಿ ಮೂವರಿಗೆ ಅನರ್ಹತೆ ಜಾರಿಗೊಳಿಸಿದ್ದರು.
|