ಸಿಪಿಎಂ ನಾಯಕ ಅಜಿತ್ ಸರ್ಕಾರ್ ಹತ್ಯೆ ಪ್ರಕರಣದಲ್ಲಿ ವಿವಾದಿತ ಆರ್ಜೆಡಿ ಸಂಸತ್ ಸದಸ್ಯ ಪಪ್ಪು ಯಾದವ್ ಅವರಿಗೆ ಆರೋಗ್ಯದ ಕಾರಣಗಳ ಮೇಲೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಆದರೆ ಅನಾರೋಗ್ಯದ ಆಧಾರದ ಮೇಲೆ ಇನ್ನಿತರ ಪರಿಹಾರಕ್ಕಾಗಿ ಕೋರ್ಟ್ ಸಂಪರ್ಕಿಸಲು ನ್ಯಾಯಮೂರ್ತಿ ಎಸ್.ಬಿ. ಸಿನ್ಹಾ ಅವರು ಆರ್ಜೆಡಿ ನಾಯಕನಿಗೆ ಅವಕಾಶ ನೀಡಿದರು.
ಅತಿಯಾದ ಸ್ಥೂಲಕಾಯದಿಂದ ಚಲನವಲನದ ಸಮಸ್ಯೆ ಎದುರಿಸುತ್ತಿರುವ ಸಂಸದನಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಲು ಪ್ರಯತ್ನಿಸಲಾಗುವುದು ಎಂದು ಕೋರ್ಟ್ ತಿಳಿಸಿತು.
1998ರಲ್ಲಿ ಪುರ್ನಿಯಾದ ಸಿಪಿಎಂ ನಾಯಕ ಸರ್ಕಾರ್ ಅವರನ್ನು ಪಾತಕಿಗಳ ಜತೆ ಸೇರಿಕೊಂಡು ಹತ್ಯೆ ಮಾಡಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ. ವಿಚಾರಣಾಧೀನ ಕೈದಿಯಾಗಿದ್ದರೂ ಅವರಿಗೆ ಜೈಲಿನಲ್ಲಿ ರಾಜೋಪಚಾರ ಮಾಡುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪಾಟ್ನಾದ ಬೇವೂರ್ ಜೈಲಿನಿಂದ ತಿಹಾರ್ ಜೈಲಿಗೆ ಅವರನ್ನು ಸ್ಥಳಾಂತರಿಸಲಾಗಿತ್ತು.
|