ಉತ್ತರ ಭಾರತೀಯ ವಲಸಿಗರ ಮೇಲೆ ಕಿಡಿಕಾರಿದ ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ವಿವಾದಕ್ಕೀಡಾಗಿರುವ ಬೆನ್ನಿಗೆ, ಇದೀಗ ಅವರ ಸೋದರ ಸಂಬಂಧಿ, ಶಿವಸೇನಾ ವರಿಷ್ಠ ಬಾಳಠಾಕ್ರೆ ಪುತ್ರ, ಶಿವ ಸೇನೆಯ ನಾಯಕ ಉದ್ಭವ್ ಠಾಕ್ರೆ ಅಂತಹುದೇ ದನಿ ಸೂಸುವ ಹೇಳಿಕೆ ನೀಡಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಮಹಾರಾಷ್ಟ್ರಿಗರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶಿವಸೇನಾ ಅಂಗವಾಗಿರುವ ವಿವಮಾನ ನಿಲ್ದಾಣ ಕಾರ್ಯಕರ್ತರು ಮತ್ತು ಅಧಿಕಾರಿಗಳ ರಾಲಿಯಲ್ಲಿ ಮಾತನಾಡುತ್ತಿದ್ದ ಉದ್ಭವ್, ಮುಂಬೈ ಏರ್ಪೋರ್ಟ್ ಯೋಜನೆಯಲ್ಲಿ ಮಹಾರಾಷ್ಟ್ರಿಗರಿಗೆ ಪ್ರಥಮ ಆದ್ಯತೆ ಲಭಿಸುವಂತಾಗಬೇಕು ಎಂದು ಹೇಳಿದ್ದಾರೆ.
"ಭರವಸೆಯ ಒಂದು ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾದಾಗ ಈ ಮಣ್ಣಿನ ಮಕ್ಕಳಿಗೆ ಆದ್ಯತೆ ಲಭಿಸುವಂತಾಗಬೇಕು ಎಂದು ನಾನು ಹೇಳಲಿಚ್ಛಿಸುತ್ತೇನೆ. ಮರಾಠಿಗರ ಬಳಿಕ ಹೊರಗಿನವರನ್ನು ಪರಿಗಣಿಸಬೇಕು" ಎಂದು ಅವರು ನುಡಿದರು.
ಒಂದೊಮ್ಮೆ ಇದಾಗದಿದ್ದಲ್ಲಿ, ಹೊರಗಿನವರು ಎಲ್ಲಿಂದ ಬಂದಿದ್ದಾರೂ, ಅಲ್ಲಿಗೆ ಅದೇ ವಿಮಾನದಲ್ಲಿ ಗಂಟುಮೂಟೆ ಕಟ್ಟಿ ಮರಳಿ ಕಳುಹಿಸಬೇಕು ಎಂದು ಖಾರವಾಗಿ ಅವರು ನುಡಿದರು.
ರಾಜ್ ವಿರುದ್ಧ ಪ್ರಕರಣ ಏತನ್ಮಧ್ಯೆ ಪೊಲೀಸರು ವಿವಾದಾಸ್ಪದ ಹೇಳಿಕೆ ನೀಡಿರುವ ಎಂಎನ್ಎಸ್ನ ರಾಜ್ ಠಾಕ್ರೆ ಮತ್ತು ಸಮಾಜವಾದಿ ಪಕ್ಷದ ಆಬು ಅಸಿಂ ಆಜ್ಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿವಿಧ ಪಂಗಡಗಳ ನಡುವೆ ಜನ್ಮಸ್ಥಳ ಮತ್ತು ಭಾಷಾ ಆಧಾರದಲ್ಲಿ ವೈರತ್ವ ಹುಟ್ಟಿಸುವಂತಹ ಮತ್ತು ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಕಾರ್ಯವೆಸಗಿರುವುದಕ್ಕಾಗಿ ಭಾರತೀಯ ದಂಡ ಸಂಹಿತೆ 153ಎ ಪ್ರಕಾರ ರಾಜ್ ಠಾಕ್ರೆ ವಿರುದ್ಧ ಪ್ರಕರಣ ದಾಖಲಾಗಿದೆ.
ಅಮಿತಾಬ್ ಬಚ್ಚನ್ ಅವರು ಮಹಾರಾಷ್ಟ್ರಕ್ಕಿಂತ ತನ್ನ ತವರು ರಾಜ್ಯ ಉತ್ತರಪ್ರದೇಶಕ್ಕೆ ಹೆಚ್ಚು ನಿಷ್ಠರಾಗಿದ್ದಾರೆ ಎಂದು ರಾಜ್ ಹೇಳಿಕೆ ನೀಡಿದ್ದ ಬಳಿಕ ಬಿಹಾರ ಮತ್ತು ಉತ್ತರ ಪ್ರದೇಶದ ವಲಸಿಗರ ಮೇಲೆ ಎಂಎನ್ಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದರು.
ಇದಾದ ಬಳಿಕ ರಾಜ್ ವಿರುದ್ಧ ಪ್ರಕರಣ ದಾಖಲಿಸಲು ಮುಂಬಯಿ ಪೊಲೀಸರ ವಿರುದ್ಧ ಉತ್ತರ ಭಾರತ ರಾಜಕಾರಣಿಗಳು ತೀವ್ರ ಒತ್ತಡ ಹೇರಿದ್ದರು.
|