ಸಂಸತ್ ದಾಳಿಯ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಮಹ್ಮದ್ ಅಫ್ಜಲ್ನ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರಕ್ಕೆ ಸೂಚಿಸುವುದಕ್ಕೆ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ. ಜಿ ಬಾಲಕೃಷ್ಣನ್ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರ ವಿಭಾಗೀಯ ಪೀಠವು ಶಿಕ್ಷೆ ವಿಧಿಸುವುದು ಮಾತ್ರ ನ್ಯಾಯಾಂಗದ ವ್ಯಾಪ್ತಿಗೆ ಬರುತ್ತದೆ. ಶಿಕ್ಷೆ ಜಾರಿಗೊಳಿಸುವುದು ಕಾರ್ಯಾಂಗದ ವ್ಯಾಪ್ತಿಯಲ್ಲಿ ಒಳಪಡುವುದು. ಶಿಕ್ಷೆಯ ಜಾರಿಗೆ ಸಂಬಂಧಿಸಿದಂತೆ ನ್ಯಾಯಾಲಯ ಸೂಚನೆ ಅಥವಾ ನಿರ್ದೇಶನ ನೀಡಲಿಕ್ಕಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಲಷ್ಕರ್-ಎ-ಹಿಂದ್ ಎಂಬ ಸರಕಾರೇತರ ಸಂಘಟನೆ ಸಲ್ಲಿಸಿದ್ದ ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯದ ವಿಚಾರಣಾ ವಿಭಾಗೀಯ ಪೀಠವು, ನ್ಯಾಯಾಲಯ ಈಗಾಗಲೇ ತನ್ನ ಅಂತಿಮ ತೀರ್ಪು ನೀಡಿಯಾಗಿದೆ. ಮರಣ ದಂಡನೆ ಜಾರಿಯ ವಿಚಾರದಲ್ಲಿ ಕಾರ್ಯಾಂಗವನ್ನು ಸಂಘಟನೆ ಸಂಪರ್ಕಿಸಬಹುದು ಎಂದು ಹೇಳಿದೆ.
ಜೈಷ್-ಎ-ಮಹ್ಮದ್ ಕಾರ್ಯಕರ್ತ ಅಫ್ಜಲ್ ಗುರುವನ್ನು ಮರಣದಂಡನೆ ಗುರಿಮಾಡಬೇಕು ಎಂದು ಕೇಳಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತು. ಅಗಸ್ಟ್ 4, 2005ರಂದು ಸರ್ವೋಚ್ಚ ನ್ಯಾಯಾಲಯವು ಅಫ್ಜಲ್ ಗುರುಗೆ ನೀಡಿದ ಮರಣ ದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮರಣ ದಂಡನೆಯಿಂದ ವಿನಾಯಿತಿ ನೀಡಬೇಕು ಎಂದು ಅಪರಾಧಿ ರಾಷ್ಟ್ರಪತಿ ಅವರಿಗೆ ದಯಾ ಬಿಕ್ಷೆಯ ಅರ್ಜಿ ಸಲ್ಲಿಸಿದ್ದು. ರಾಷ್ಟ್ರಪತಿಗಳು ಇನ್ನೂ ತಮ್ಮ ತೀರ್ಪು ನೀಡಿಲ್ಲ.
|