ಸರಕಾರದ ಉಳಿವಿಗೆ ಸಮಾಜವಾದಿ ಪಕ್ಷದೊಂದಿಗೆ 'ವ್ಯವಹಾರ'ನಿರತವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ಕೆಂಡ ಕಾರಿರುವ ಪ್ರತಿಪಕ್ಷ ಬಿಜೆಪಿ, ತಕ್ಷಣವೇ ಸಂಸತ್ತಿನಲ್ಲಿ ವಿಶ್ವಾಸ ಮತ ಕೋರುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದೆ.
ಸರಕಾರವು ಗೊಂದಲದ ಗೂಡಾಗಿಬಿಟ್ಟಿದೆ. ಅದು ಆಡಳಿತ ನಡೆಸುವ ನೈತಿಕ ಅರ್ಹತೆ ಕಳೆದುಕೊಂಡಿದೆ. ಉಳಿಯುವುದಕ್ಕಾಗಿ ಸರಕಾರ ಯಾವುದೇ ವ್ಯವಹಾರಕ್ಕೂ ಸಿದ್ಧವಾದಂತೆ ತೋರುತ್ತಿದೆ ಎಂದು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಮನಮೋಹನ್ ಸಿಂಗ್ ಸರಕಾರವು ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡಿದೆ. ಸರಕಾರ ಕೂಡಲೇ ಸಂಸತ್ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಬೇಕು ಎಂದು ಆಡ್ವಾಣಿ ಆಗ್ರಹಿಸಿದರು.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ ಎಂದು ಬದ್ಧವೈರಿಗಳಾಗಿದ್ದ ಕಾಂಗ್ರೆಸ್-ಸಮಾಜವಾದಿ ಪಕ್ಷಗಳು ಸರಕಾರದ ಉಳಿವಿಗಾಗಿ ಪರಸ್ಪರ ಒಡಂಬಡಿಕೆ ಮಾಡಿಕೊಂಡಿರುವುದನ್ನು ಉಲ್ಲೇಖಿಸಿ ಆಡ್ವಾಣಿ ಹೇಳಿದರು.
|